ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ ಗೆ 242 ಪ್ರಯಾಣಿಕರ ಹೊತ್ತುಕೊಂಡು ಟೇಕಾಫ್ ಆದ ಏರ್ ಇಂಡಿಯಾ ವಿಮಾನವು ಕೆಲವೇ ನಿಮಿಷಗಳಲ್ಲಿ ಪತನಗೊಂಡ ದುರಂತದಲ್ಲಿ 241 ಪ್ರಯಾಣಿಕರು ಸುಟ್ಟು ಕರಕಲಾಗಿದ್ದರೆ, ಆ ಸ್ಥಳದಲ್ಲಿ ಭಗವದ್ಗೀತೆ ಪುಸ್ತಕವೊಂದು ಸುರಕ್ಷಿತವಾಗಿ ಸಿಕ್ಕಿರುವುದಾಗಿ ಸುದ್ದಿಯಾಗಿದೆ.
ವಿಮಾನ ಅಪಘಾತದ ಅವಶೇಷಗಳ ನಡುವೆ ಪತ್ತೆಯಾದ ಭಗವದ್ಗೀತೆಯ ಹಾನಿಯಾಗದ ಪುಟಗಳನ್ನು ವ್ಯಕ್ತಿಯೊಬ್ಬ ಪ್ರದರ್ಶಿಸುತ್ತಿರುವ ದೃಶ್ಯದ ವೀಡಿಯೊ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೀಗಾಗಿ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ದುರಂತದಲ್ಲಿ ಒಬ್ಬ ವಿಮಾನ ಪ್ರಯಾಣಿಕ ಮಾತ್ರ ಸಾವಿನಿಂದ ಪಾರಾಗಿದ್ದಾರೆ. ವಿಮಾನವು ವೈದ್ಯಕೀಯ ವಿಶ್ವವಿದ್ಯಾಲಯದ ಹಾಸ್ಟೆಲ್ ಮೇಲೆ ಅಪ್ಳಿಸಿದ್ದು, ಹಲವು ವಿದ್ಯಾರ್ಥಿ ಗಳು ಮೃತಪಟ್ಟಿದ್ದಾರೆ. ಕೆಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತನಿಖೆಯನ್ನು ಪ್ರಾರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ವಿಮಾನ ಅಪಘಾತ ಸ್ಥಳಕ್ಕೆ ಭೇಟಿ ನೀಡಿದರು. ದುರಂತದಲ್ಲಿ ಬದುಕುಳಿದ ಹಾಗೂ ಹಾಸ್ಟೆಲ್ ವಾಸಿ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದರು. ಡಿಎನ್ಎ ಪರೀಕ್ಷೆ ಬಳಿಕ ನಿಖರವಾಗಿ ಸಾವಿನ ಸಂಖ್ಯೆ ಪ್ರಕಟಿಸುವುದಾಗಿ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.