ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಿಗ್ಗೆ ಏರ್ ಇಂಡಿಯಾ ವಿಮಾನ ದುರಂತದ ಸ್ಥಳಕ್ಕೆ ಭೇಟಿ ಸಂತ್ರಸ್ತರಿಗೆ ಯೋಗಕ್ಷೇಮ ವಿಚಾರಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿದ ನಂತರ ಆಸ್ಪತ್ರೆಗೆ ಭೇಟಿ ನೀಡಿದ ಪ್ರಧಾನಿ ಮೋದಿ ದುರಂತದಲ್ಲಿ ಪಾರಾದ ಏಕೈಕ ಪ್ರಯಾಣಿಕ ಹಾಗೂ ಗಾಯಾಳುಗಳನ್ನು ಭೇಟಿ ನೀಡಿ ಸಾಂತ್ವಾನ ಹೇಳಿದರು.
ನಂತರ ದುರಂತದಲ್ಲಿ ಮೃತಪಟ್ಟ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಅವರ ಮನೆಗೆ ತೆರಳಿ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ನಮ್ಮೊಂದಿ ಅವರು ತುಂಬಾ ಕೆಲಸ ಮಾಡಿದ್ದರು. ಹೆಗಲಿಗೆ ಹೆಗಲು ಕೊಡುತ್ತಿದ್ದ ಅವರಿಗೆ ನಾವು ಹೆಗಲು ಕೊಡಬೇಕಾಗಿದೆ ಎಂದು ಮೋದಿ ಪ್ರತಿಕ್ರಿಯಿಸಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಮತ್ತು ಗುಜರಾತ್ ಗೃಹ ಸಚಿವ ಹರ್ಷ ಸಾಂಘವಿ ಅವರು ವಿಮಾನ ಕಾಲೇಜು ಹಾಸ್ಟೆಲ್ ಹೇಗೆ ಅಪ್ಪಳಿಸಿತು ಎಂಬುದರ ಬಗ್ಗೆ ಮೋದಿಗೆ ವಿವರಿಸಿದರು.
ನಂತರ ಪ್ರಧಾನಿಯವರು ನಗರದ ಸಿವಿಲ್ ಆಸ್ಪತ್ರೆಗೆ ತೆರಳಿ ಅಪಘಾತದಲ್ಲಿ ಗಾಯಗೊಂಡವರನ್ನು ಭೇಟಿಯಾದರು. ಒಂದು ದಿನದ ಹಿಂದೆ ನಡೆದ ಅಪಘಾತದಲ್ಲಿ ಪವಾಡಸದೃಶವಾಗಿ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಶ್ಕುಮಾರ್ ರಮೇಶ್ ಅವರನ್ನು ಭೇಟಿಯಾದರು.
ಇದಕ್ಕೂ ಮುನ್ನ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಅವರು, ಅಹಮದಾಬಾದ್ನಲ್ಲಿ ನಡೆದ ವಿಮಾನ ದುರಂತದಿಂದ ನಾವೆಲ್ಲರೂ ತೀವ್ರ ಆಘಾತಗೊಂಡಿದ್ದೇವೆ. ಇಷ್ಟೊಂದು ಹಠಾತ್ ಮತ್ತು ಹೃದಯವಿದ್ರಾವಕ ರೀತಿಯಲ್ಲಿ ಹಲವಾರು ಜೀವಗಳನ್ನು ಕಳೆದುಕೊಂಡಿರುವುದು ಪದಗಳಿಗೆ ನಿಲುಕದಷ್ಟು ದೊಡ್ಡ ದುರಂತ. ಎಲ್ಲಾ ದುಃಖಿತ ಕುಟುಂಬಗಳಿಗೆ ಸಂತಾಪಗಳು ಎಂದು ಬರೆದುಕೊಂಡಿದ್ದಾರೆ.
ತಮ್ಮವರನ್ನು ಕಳೆದುಕೊಂಡವರ ನೋವನ್ನು ನಮಗೆ ಅರ್ಥವಾಗುತ್ತದೆ. ವರ್ಷಗಳವರೆಗೆ ಈ ಆಘಾತ ನಮ್ಮನ್ನು ಕಾಡಲಿದೆ ಎಂದಿದ್ದಾರೆ.
ನಿನ್ನೆ ಮಧ್ಯಾಹ್ನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಮೇಘನಿನಗರ ಪ್ರದೇಶದ ಬಿಜೆ ವೈದ್ಯಕೀಯ ಕಾಲೇಜಿನ ಸಂಕೀರ್ಣಕ್ಕೆ ಬೋಯಿಂಗ್ 787 ಡ್ರೀಮ್ಲೈನರ್ ವಿಮಾನ (AI171) ಅಪ್ಪಳಿಸಿದ ಸ್ಥಳವನ್ನು ಇಂದು ಪ್ರಧಾನಿ ಸುಮಾರು 20 ನಿಮಿಷಗಳ ಕಾಲ ಪರಿಶೀಲಿಸಿದರು.