ಕಮಲ್ ಹಾಸನ್ ನಟಿಸಿರುವ ‘ಥಗ್ ಲೈಫ್’ ಸಿನಿಮಾಕ್ಕೆ ಕರ್ನಾಟಕದಲ್ಲಿ ಅಘೋಷಿತ ನಿಷೇಧಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕರ್ನಾಟಕ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ಈ ಸಂಬಂಧ ಸುಪ್ರೀಂಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಇದೇ ಅರ್ಜಿಗೆ ಸಂಬಂಧಿಸಿದಂತೆಈ ಹಿಂದೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆದಾಗ ಪ್ರಕರಣವನ್ನು ರಾಜ್ಯ ಹೈಕೋರ್ಟ್ನಲ್ಲಿಯೇ ಇತ್ಯರ್ಥ ಪಡಿಸಿಕೊಳ್ಳುವಂತೆ ಸುಪ್ರೀಂ ಸೂಚಿಸಿತ್ತು, ಆದರೆ ಕಮಲ್ ಪರ ವಕೀಲರು, ಯಾರು ಸಿನಿಮಾದ ಬಿಡುಗಡೆಗೆ ತಡೆ ಒಡ್ಡುತ್ತಿದ್ದಾರೆಯೋ ಅವರೊಟ್ಟಿಗೆ ಸಂಧಾನ ಮಾಡಿಕೊಳ್ಳುವಂತೆ ಹೈಕೋರ್ಟ್ ಸೂಚಿಸಿದೆ ಎಂದು ಉತ್ತರಿಸಿದ್ದರು. ಈ ಕಾರಣಕ್ಕೆ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಸ್ವೀಕರಿಸಿತ್ತು.
‘ಥಗ್ ಲೈಫ್’ ಸಿನಿಮಾ ಪರವಾಗಿ ವಕೀಲ ನವಪ್ರೀತ್ ಕೌರ್, ಸಿಬಿಎಫ್ಸಿ ಪ್ರಮಾಣ ಪತ್ರ ಪಡೆದಿರುವ ತಮಿಳು ಚಿತ್ರ “ಥಗ್ ಲೈಫ್”ಗೆ ಕರ್ನಾಟಕ ರಾಜ್ಯದ ಚಿತ್ರಮಂದಿರಗಳಲ್ಲಿ ಅನಧಿಕೃತವಾಗಿ ನಿಷೇಧ ಹೇರಲಾಗಿದೆ. ಹಿಂಸಾಚಾರದ ಬೆದರಿಕೆಯಡಿ ನಿಷೇಧವನ್ನು ಜಾರಿ ಮಾಡಿದ್ದು, ಕಾನೂನು ಪ್ರಕ್ರಿಯೆಯಿಂದ ನಿಷೇಧವನ್ನು ಹೇರಲಾಗಿಲ್ಲ, ಸಿನಿಮಾ ಮಂದಿರಗಳಿಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಲಾಗಿದೆ. ಭಾಷಾ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಕೊಂಡು ಹಿಂಸಾಚಾರದ ಪ್ರಚೋದನೆ ಮಾಡಲಾಗಿದೆ ಎಂದು ವಾದಿಸಿದ್ದಾರೆ.
ಸಿನಿಮಾ ರಿಲೀಸ್ಗೆ ಭದ್ರತೆ ನೀಡುವಂತೆ ಕಮಲ್ ಹಾಸನ್ ಕರ್ನಾಟಕ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಕನ್ನಡಿಗರ ಬಳಿ ಕ್ಷಮೆ ಕೇಳಿ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಹೇಳಿತ್ತು. ಮತ್ತೆ ಶುಕ್ರವಾರ ವಿಚಾರಣೆ ನಡೆಸಿರುವ ಕೋರ್ಟ್ ‘ಇನ್ನೂ ಕ್ಷಮೆ ಕೇಳಿಲ್ಲವೇ’ ಎಂದು ಪ್ರಶ್ನೆ ಮಾಡಿದೆ.
ಈ ಸಂಬಂಧ ಕನ್ನಡ ಸಾಹಿತ್ಯ ಪರಿಷತ್ ಅರ್ಜಿ ಸಲ್ಲಿಸಿ, ತಮ್ಮ ವಾದ ಕೇಳುವಂತೆ ಕೋರಿದೆ. ಹೈಕೋರ್ಟ್ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಎಂ. ನಾಗ ಪ್ರಸನ್ನ ‘ಇನ್ನೂ ಕ್ಷಮೆ ಕೇಳಿಲ್ಲವೇ’ ಎಂದು ಪ್ರಶ್ನೆ ಮಾಡಿದ್ದಾರೆ. ಉತ್ತರಿಸಿದ ಕನ್ನಡ ಸಾಹಿತ್ಯ ಪರಿಷತ್ ಪರ ಹಿರಿಯ ವಕೀಲ ಎಸ್.ಬಸವರಾಜ್, ‘ಇಲ್ಲ ಕಮಲ್ ಹಾಸನ್ ಸ್ಟುಪಿಡ್ ಸ್ಟೇಟ್ಮೆಂಟ್ ನೀಡಿದ್ದಾರೆ. ಕರ್ನಾಟಕ, ಕನ್ನಡ ಪದ ಪುರಾಣಗಳಲ್ಲೂ ಬಳಕೆಯಾಗಿದೆ’ ಎಂದು ಹೇಳಿದ್ದಾರೆ.