ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಸಮಾಜದ ನಿಖರವಾದ ಸಂಖ್ಯೆ ತಿಳಿಯುವುದು ವೀರಶೈವ ಲಿಂಗಾಯತ ಸಮಾಜವನ್ನು ಒಗ್ಗೂಡಿಸಿ ಒಂದೇ ಎಂಬ ಭಾವನೆ ಮೂಡಿಸಲು ಇದೇ ಸೆ.19ರಂದು ವೀರಶೈವ ಲಿಂಗಾಯತ ಏಕತಾ ಸಮಾವೇಶ ಆಯೋಜಿಸಲಾಗಿದೆ.
ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ವೀರಶೈವ ಲಿಂಗಾಯತ ಏಕತಾ ಸಮಾವೇಶವು ಸೆ.19ರಂದು ಮಧ್ಯಾಹ್ನ 3ಕ್ಕೆ ನಡೆಯಲಿದೆ, ಸಮಾವೇಶದಲ್ಲಿ ಒಂದು ಸಾವಿರಕ್ಕೂ ಹೆಚ್ಚು ನಾಡಿನ ಹರ ಗುರು ಚರಮೂರ್ತಿಗಳು ಆಗಮಿಸಿ ಆಶೀರ್ವದಿಸಲಿದ್ದಾರೆ ಎಂದು ಅಖಿಲ ಭಾರತ ವೀರಶೈವ ಮಹಾಸಭೆಯ ಮಹಿಳಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷೆ ವೀಣಾ ಕಾಶಪ್ಪನವರ್ ತಿಳಿಸಿದ್ದಾರೆ.
ಸಮಾಜದ ಎಲ್ಲ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು,ಒಂದು ಲಕ್ಷಕ್ಕೂ ಅಧಿಕ ಸಮಾಜಬಾಂಧವರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಮಹಿಳೆಯರು ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು.
ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಅನುಸೂಚಿಯ ಕಾಲಂ ನಂ. 8ರಲ್ಲಿ ಅಂದರೆ ಧರ್ಮದ ಕಾಲಂನಲ್ಲಿ ಕೋಡ್ ನಂ : 11ರಲ್ಲಿ ನೀಡಿರುವ “ಇತರೇ” ಕಾಲಂನಲ್ಲಿ “ವೀರಶೈವ ಲಿಂಗಾಯತ” ಎಂದು ನಮೂದಿಸಬೇಕು. 07 ಧರ್ಮಗಳ ಹೊರತಾಗಿ ಇತರೆ ಧರ್ಮಗಳಿದ್ದಲ್ಲಿ ಅವುಗಳನ್ನು ನಮೂದಿಸಲು ಆಯೋಗವು ಅವಕಾಶ ನೀಡಿರುತ್ತದೆ.
ಕಾಲಂ ನಂ. 9ರ ಜಾತಿಯ ಕಾಲಂನಲ್ಲಿ “ಲಿಂಗಾಯತ”ಕ್ಕೆ ಕೊಟ್ಟ ಸಂಕೇತ ಸಂಖ್ಯೆ: 0832 ಅಥವಾ “ವೀರಶೈವ”ಕ್ಕೆ ಕೊಟ್ಟ ಸಂಕೇತ ಸಂಖ್ಯೆ: 1522 ನಮೂದಿಸಬೇಕು. ನಮ್ಮ ಸಮಾಜದ ನಿಖರ ಸಂಖ್ಯೆ ತಿಳಿಯಲು ಈ ಕಾಲಂ ಅತ್ಯಂತ ಅವಶ್ಯಕವಾಗಿರುತ್ತದೆ. ಕಾಲಂ ನಂ. 10ರಲ್ಲಿ ಸಮಾಜಬಾಂಧವರು ತಮ್ಮ ಉಪಜಾತಿ ಕೋಡ್ ನಂ ಗುರುತಿಸಿಕೊಂಡು ಅದನ್ನು ದಾಖಲಿಸಬೇಕು. ಉಪಜಾತಿ ಕಾಲಂನಲ್ಲಿ ತಾವು ಸೇರಿದ ಉಪಜಾತಿಯ ಕೋಡ್ ನಂಬರನ್ನು ಖಚಿತಪಡಿಸಿಕೊಂಡು ಬರೆಸಬೇಕು ಎಂದು ಮನವಿ ಮಾಡಿದರು.