ಕೊಪ್ಪಳ ಲೋಕಾಯುಕ್ತ ಉಪ ಪೊಲೀಸ್ ಅಧೀಕ್ಷಕ ವಸಂತಕುಮಾರ್ ನೇತೃತ್ವದಲ್ಲಿ ನಗರಸಭೆಯ ಕಚೇರಿ, ಉನ್ನತ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮನೆಗಳ ಮೇಲೆ ದಾಳಿ ನಡೆದಿದೆ.
ನಗರಸಭೆ ಕಚೇರಿಯ ಅನುದಾನದ ದಾಖಲೆಗಳು, ಕಾಮಗಾರಿಗಳ ವಿವರಗಳು ಮತ್ತು ಇತರ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಿದೆ. ನಗರಸಭೆಯ ಜೂನಿಯರ್ ಇಂಜಿನಿಯರ್ ಸೋಮಲಿಂಗಪ್ಪ, ಕಂದಾಯ ಅಧಿಕಾರಿ ಉಜ್ಜಲ್, ಗುತ್ತಿಗೆದಾರರಾದ ಶಕೀಲ್ ಪಟೇಲ್ ಮತ್ತು ಪ್ರವೀಣ್ ಕಂದಾರಿ ಅವರ ಮನೆಗಳ ಮೇಲೂ ದಲೋಕಾಯುಕ್ತ ದಾಳಿಯಾಗಿದೆ.
ಇವರೆಲ್ಲ 2023-24ನೇ ಸಾಲಿನ ನಗರಸಭೆಯ ಅನುದಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪದಡಿ ದಾಳಿ ನಡೆಸಲಾಗಿದೆ. ನಗರಸಭೆಯ 2023-24ನೇ ಸಾಲಿನ ಒಟ್ಟು 336 ಕಾಮಗಾರಿಗಳಲ್ಲಿ 10 ಕೋಟಿ ರೂಪಾಯಿ ದುರ್ಬಳಕೆ ಮಾಡಿರುವ ಆರೋಪವಿದೆ. ಈ ಕಾಮಗಾರಿಗಳಲ್ಲಿ ಕೆಲವು ಅರ್ಧಕ್ಕೆ ನಿಂತಿದ್ದು, ಕೆಲವು ಕಾಮಗಾರಿಗಳನ್ನು ಆರಂಭಿಸದೆಯೇ ಹಣ ಎತ್ತಿರುವ ಆರೋಪವಿದೆ. ಈ ಬಗ್ಗೆ ಸ್ಥಳೀಯ ನಾಗರಿಕರಿಂದಲೂ ದೂರುಗಳು ಬಂದಿದ್ದವು.
ಕೊಪ್ಪಳ ನಗರಸಭೆಯಲ್ಲಿ 2023-24ರಲ್ಲಿ ನಗರದ ಅಭಿವೃದ್ಧಿಗಾಗಿ ಬಿಡುಗಡೆಯಾದ ಅನುದಾನವನ್ನು ಸರಿಯಾಗಿ ಬಳಕೆ ಮಾಡದಿರುವ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಕಾಮಗಾರಿಗಳ ಗುಣಮಟ್ಟ, ಪೂರ್ಣಗೊಳ್ಳದ ಯೋಜನೆಗಳು ಮತ್ತು ಹಣದ ದುರುಪಯೋಗದ ಆರೋಪಗಳು ಲೋಕಾಯುಕ್ತದ ಗಮನಕ್ಕೆ ಬಂದವು. ಈ ಆರೋಪಗಳನ್ನು ಆಧರಿಸಿ ಲೋಕಾಯುಕ್ತ ಡಿವೈ ಎಸ್ಪಿ ವಸಂತಕುಮಾರ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
ದಾಳಿಯ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಲೋಕಾಯುಕ್ತ ಅಧಿಕಾರಿಗಳು ವಶಪಡಿಸಿಕೊಂಡ ದಾಖಲೆಗಳನ್ನು ಆಧರಿಸಿ ತನಿಖೆಯನ್ನು ಮುಂದುವರಿಸಲಿದ್ದಾರೆ.