ಬೆಂಗಳೂರು: ಕ್ರಿಕೆಟ್ ಇತಿಹಾಸದಲ್ಲೇ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿರಲಿಲ್ಲಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಗುರುವಾರ ಕೆಎಸ್ ಸಿಎ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ ಸಿಬಿ ಐಪಿಎಲ್ ಚಾಂಪಿಯನ್ ಆದ ಸಂಭ್ರಮಾಚಣೆಗೆ 40 ಸಾವಿರ ಜನರನ್ನು ನಿರೀಕ್ಷಿಸಿದ್ದೆವು. ಆದರೆ ನಿರೀಕ್ಷೆಗಿಂತ ಮೂರು ಪಟ್ಟು ಹೆಚ್ಚು ಸಂಖ್ಯೆಯಲ್ಲಿ ಜನರು ಸೇರಿದ್ದರು ಎಂದರು.
ವಿಧಾನಸೌಧದ ಬಳಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ 35 ಸಾವಿರ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭಕ್ಕೆ 40 ಸಾವಿರ ಜನರು ಬರಬಹುದು ಎಂದು ನಿರೀಕ್ಷಿಸಿದ್ದೇವು. ಆದರೆ ಲಕ್ಷಾಂತರ ಜನರು ಒಮ್ಮೆಲೆ ಸೇರಿದ್ದರು. ಮೆಟ್ರೋ ರೈಲಿನಲ್ಲಿ 8.77 ಲಕ್ಷ ಟಿಕೆಟ್ ಬುಕ್ಕಿಂಗ್ ಆಗಿದ್ದವು ಎಂದು ಅವರು ಹೇಳಿದರು.
ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಕ್ರಿಕೆಟ್ ಇತಿಹಾಸದಲ್ಲೇ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಜನರು ಮುಗಿಬಿದ್ದಿದ್ದರಿಂದ 11 ಮಂದಿ ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ. 56 ಜನರು ಗಾಯಗೊಂಡಿದ್ದಾರೆ. 46 ಗಾಯಾಳುಗಳು ಡಿಸ್ಚಾರ್ಜ್ ಆಗಿದ್ದಾರೆ. 10 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ವಿವರಿಸಿದರು.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಮೃತರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ. ಮುಂದೆ ಇಂತಹ ವಿಜಯೋತ್ಸವ ನಡೆಯುವ ವೇಳೆ ಪೊಲೀಸ್ ನಿರ್ದೇಶನಗಳ ಚೌಕಟ್ಟಿನಲ್ಲಿಯೇ ಮಾಡುತ್ತೇವೆ. ಇದಕ್ಕಾಗಿ ಹೊಸ ಎಸ್ ಒಪಿ ಮಾಡುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಗುವುದು ಎಂದು ಅವರು ಹೇಳಿದರು.