ಲಿವ್-ಇನ್ ಸಂಬಂಧದಲ್ಲಿದ್ದ ಯುವತಿ ಮದುವೆಗೆ ನಿರಾಕರಿಸಿದ್ದಕ್ಕೆ ಸ್ನೇಹಿತನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕೊಲ್ಲಾಪುರದ ಸರ್ನೋಬತ್ವಾಡಿಯಲ್ಲಿ ನಡೆದಿದೆ.
ಸಮೀಕ್ಷಾ ಭರತ್ ನರಸಿಂಗೆ ಅಲಿಯಾಸ್ ಬಾಗ್ಡಿ ಕೊಲೆಯಾದ ಯುವತಿ. ಶಿವಾಜಿ ಪೇಟೆ ನಿವಾಸಿ ಸತೀಶ್ ಮಾರುತಿ ಯಾದವ್ ಕೊಲೆ ಮಾಡಿ ಪರಾರಿಯಾಗಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಸಮೀಕ್ಷಾ ತಾಯಿ, ತಮ್ಮ, ತಂಗಿಯೊಂದಿಗೆ ಕಸಬಾ ಬಾವ್ಡಾದ ಜೈ ಭವಾನಿ ಗಲ್ಲಿಯಲ್ಲಿ ವಾಸಿಸುತ್ತಿದ್ದಳು. 2018 ರಲ್ಲಿ ಆಕೆಯ ಮದುವೆಯಾಗಿ ಗಂಡನೊಂದಿಗೆ ಹೊಂದಾಣಿಕೆಯಾಗದೆ ತವರಿಗೆ ಮರಳಿದ್ದಳು. ಈವೆಂಟ್ ಮ್ಯಾನೇಜ್ಮೆಂಟ್ ಕೆಲಸ ಮಾಡುತ್ತಿದ್ದ ಆಕೆಗೆ ತೆಲಂಗಾಣದ ಐಶು ಆಂಪ್ಲೆ ಮತ್ತು ಕೊಲ್ಹಾಪುರದ ಸತೀಶ್ ಯಾದವ್ ಪರಿಚಯವಾಗಿತ್ತು. ಮೂರು ತಿಂಗಳಿನಿಂದ ಈ ಮೂವರು ಸರ್ನೋಬತ್ವಾಡಿಯ ಫ್ಲ್ಯಾಟ್ನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದರು. ಸತೀಶ್ ಮತ್ತು ಸಮೀಕ್ಷಾ ನಡುವೆ ಜಗಳ ನಡೆಯುತ್ತಿದ್ದರಿಂದ ಎಂಟು ದಿನಗಳ ಹಿಂದೆ ಸಮೀಕ್ಷಾ ಮತ್ತು ಐಶು ಕಸಬಾ ಬಾವ್ಡಾದಲ್ಲಿರುವ ತಾಯಿಯ ಮನೆಗೆ ಮರಳಿದ್ದರು.
ಮಂಗಳವಾರ ಮಧ್ಯಾಹ್ನ ಸಮೀಕ್ಷಾ ಮತ್ತು ಐಶು ತಮ್ಮ ವಸ್ತುಗಳನ್ನು ತೆಗೆದುಕೊಳ್ಳಲು ಫ್ಲ್ಯಾಟ್ಗೆ ಹೋಗಿದ್ದರು. ಕೋಪದ ಭರದಲ್ಲಿ ಸಮೀಕ್ಷಾಳನ್ನು ಕೋಣೆಗೆ ಕರೆದೊಯ್ದು ಎದೆಗೆ ಚಾಕುವಿನಿಂದ ಇರಿದು ಹೊರಗಿನಿಂದ ಬೀಗ ಹಾಕಿ ಪರಾರಿಯಾಗಿದ್ದಾನೆ.
ಐಶು ಬಾಗಿಲು ತೆರೆಯಲು ಪ್ರಯತ್ನಿಸಿದರೂ ಏನೂ ಮಾಡಲಾಗಲಿಲ್ಲ. ಆಕೆ ವಸಗಡೆಯಲ್ಲಿರುವ ಸ್ನೇಹಿತ ಅಭಿಷೇಕ್ ಸೋನವಣೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾಳೆ. ಅಭಿಷೇಕ್ ಬಂದು ಬಾಗಿಲು ತೆರೆದು ಒಳಗೆ ಹೋದಾಗ ರಕ್ತದ ಮಡುವಿನಲ್ಲಿ ಸಮೀಕ್ಷಾ ಬಿದ್ದಿದ್ದಳು. ಸಮೀಕ್ಷಾಳನ್ನು ಆಟೋದಲ್ಲಿ ಆಸ್ಪತ್ರೆಗೆ ಕರೆದೊ ಯ್ದಾಗ ರಕ್ತಸ್ರಾವದಿಂದ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.