ಒಡಿಶಾದ ಬೆಹರಾಂಪುರದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರನ್ನು ಅವರ ಬಾಡಿಗೆ ಮನೆಯಲ್ಲಿರುವ ಮಹಿಳೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.
ತಮ್ಮ ವಿವಾಹೇತರ ಸಂಬಂಧದಲ್ಲಿ ಉಂಟಾದ ಜಗಳದಿಂದಾಗಿ ಬಾಡಿಗೆದಾರ ಮಹಿಳೆ ಈ ಕೃತ್ಯ ಎಸಗಿರುವುದು ತಿಳಿದು ಬಂದಿದೆ. ನಿವೃತ್ತ ಪೊಲೀಸ್ ಅಧಿಕಾರಿ ಸುಟ್ಟಗಾಯಗಳಿಂದ ಸಾವನ್ನಪ್ಪಿದ್ದಾರೆ. ಮೃತರನ್ನು ಹರಿಹರ ಸಾಹು ಎಂದು ಗುರುತಿಸಲಾಗಿದೆ. ಅವರು ನಿವೃತ್ತ ರಿಸರ್ವ್ ಇನ್ಸ್ಪಟೆಕ್ಟರ್, ಸುದೇಷ್ಣು ಜೇನಾ ಜತೆ ಸಂಬಂಧ ಬೆಳೆಸಿದ್ದರು. ಆಕೆ ಅವರ ಮನೆಯಲ್ಲಿ ಬಾಡಿಗೆದಾರಳಾಗಿ ವಾಸಿಸುತ್ತಿದ್ದಳು. ಇತ್ತೀಚೆಗೆ ಇಬ್ಬರ ನಡುವೆ ಜಗಳ ಉಂಟಾಗಿದ್ದು, ಸಾವಿನ ಮೂಲಕ ಅಂತ್ಯ ಗೊಂಡಿದೆ.
ಘಟನೆ ನಡೆದ ದಿನ ಸುದೇಷ್ಣ ಸಾಹು ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ ಎನ್ನಲಾಗಿದೆ. ನೆರೆಹೊರೆಯವರು ಮತ್ತು ಕುಟುಂಬ ಸದಸ್ಯರಿಗೆ ಅವರ ನಡುವಿನ ಸಂಬಂಧ ಹದಗೆಟ್ಟಿರುವುದು ತಿಳಿದಿರಲಿಲ್ಲ. ಸಾಹು ಅವರನ್ನು ಆರಂಭದಲ್ಲಿ ಬೆರ್ಹಾಂಪುರದ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ಕಟಕ್ನ ಎಸ್ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಪಡೆಯುತ್ತಿದ್ದಾಗ ಸುಟ್ಟಗಾಯಗಳಿಂದ ಅವರು ಮೃತಪಟ್ಟಿದ್ದಾರೆ.
ಸಾಹು ಅವರ ಮಗಳು ಪೊಲೀಸರಿಗೆ ದೂರು ನೀಡಿದ್ದಾಳೆ. ವಿಚಾರಣೆಯ ಸಮಯದಲ್ಲಿ ಆರೋಪಿ ಮಹಿಳೆಯು ಅಪರಾಧವನ್ನು ಒಪ್ಪಿಕೊಂಡಿದ್ದಾಳೆ ಮತ್ತು ಕೃತ್ಯವು ಪೂರ್ವ ಯೋಜಿತವಾಗಿದೆ ಎಂದು ತಿಳಿಸಿದ್ದಾಗಿ ವರದಿಯಾಗಿದೆ.
ಮಹಿಳಾ ಬಾಡಿಗೆದಾರರೊಬ್ಬರು ಮಾಲೀಕರಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದು, ಇದು ಪೂರ್ವ ಯೋಜಿತ ಕೊಲೆ ಎಂದು ಒಪ್ಪಿಕೊಂಡಿರುವುದಾಗಿ ಬೆರ್ಹಾಂಪುರ್ ಪೊಲೀಸ್ ವರಿಷ್ಠಾಧಿಕಾರಿ ಶ್ರವಣ್ ವಿವೇಕ್ ಎಂ ಹೇಳಿದ್ದಾರೆ.ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಸ್ತುತ ತನಿಖೆ ನಡೆಯುತ್ತಿದೆ.