“ದ್ವೇಷ ಬಿತ್ತುವ, ಸಮಾಜ ಇಬ್ಬಾಗ ಮಾಡುವುದೇ ಅವರ (ಆರ್.ಅಶೋಕ್) ಅಜೆಂಡಾ. ಅವರೇ ಶಾಂತಿಭಂಗ ಮಾಡುವ, ಅಶಾಂತಿ ಉಂಟುಮಾಡುವ ಷಡ್ಯಂತ್ರ ರೂಪಿಸುತ್ತಿದ್ದಾರೆ”ಎಂದು ಡಿಸಿಎಂ ಡಿಕೆಶಿವಕುಮಾರ್ ವಾಗ್ದಾಳಿ ನಡೆಸಿದರು.
ಕನಕಪುರದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಹೀಗೆ ಉತ್ತರಿಸಿದರು. ಧರ್ಮಸ್ಥಳ, ದಸರಾ ಉದ್ಘಾಟನೆ, ಚಾಮುಂಡಿ ಬೆಟ್ಟ ಪ್ರವೇಶದ ವಿಚಾರದಲ್ಲಿ ವಿಪಕ್ಷ ನಾಯಕ ಅಶೋಕ್ ಅವರ ಟೀಕೆಗಳ ಬಗ್ಗೆ ಕೇಳಿದಾಗ, “ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಉದ್ಯೋಗವಿಲ್ಲ. ಎಲ್ಲಾ ಷಡ್ಯಂತ್ರಗಳ ಬಗ್ಗೆ ತನಿಖೆ ನಡೆಯುತ್ತಿದೆ. ಎಲ್ಲವೂ ಶೀಘ್ರ ಆಚೆ ಬರಲಿದೆ” ಎಂದು ಹೇಳಿದರು.
ಮದ್ದೂರಿಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ ಬಳಿಕ ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಡಿಸಿಎಂ ಡಿಕೆ ಶಿವಕುಮಾರ್ ಹಿಂದೂ ಎಂದು ಹೇಳಿಕೊಳ್ಳುತ್ತಾರೆಯೇ ಹೊರತು, ಅವರಿಗೆ ಯಾವ ಅಭಿಮಾನವೂ ಇಲ್ಲ. ಅವರು ನಿರಾಶರಾಗಿದ್ದಾರೆ ಕಲ್ಲು ಹೊಡೆದಿರುವವರು ಇಲ್ಲಿಯವರು ಅಲ್ಲ ಎಂದಾದರೆ ಅವರೇನು ಪಾಕಿಸ್ತಾನದಿಂದ ಬಂದಿದ್ದಾರಾ? ಇದು ಪೂರ್ವ ನಿಯೋಜಿತ ಕೃತ್ಯ. ಸರ್ಕಾರದ ಗುಪ್ತಚರ ಇಲಾಖೆ ಇದನ್ನು ಪತ್ತೆ ಮಾಡಬೇಕಿತ್ತು. ಗಣಪತಿ ಮೂರ್ತಿ ವಿಸರ್ಜನೆ ಸಮಯದಲ್ಲಿ ಪೊಲೀಸ್ ಇಲಾಖೆ ಸಿದ್ಧತೆ ಮಾಡಿಕೊಳ್ಳಬೇಕಿತ್ತು ಎಂದು ಬುಧವಾರ ಹೇಳಿದ್ದರು.
ಕಾಂಗ್ರೆಸ್ನ ಮತಬ್ಯಾಂಕ್ ರಾಜಕಾರಣದಿಂದಾಗಿ ರಾಜ್ಯದಲ್ಲಿ ಮಿನಿ ಪಾಕಿಸ್ತಾನಗಳು ಸೃಷ್ಟಿಯಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಸಿಎಂ ಸಿದ್ದರಾಮಯ್ಯನವರಿಂದಾಗಿ ನಮ್ಮನ್ನು ಏನೂ ಮಾಡಲ್ಲ ಎಂಬ ಭಾವನೆ ಮುಸ್ಲಿಮರಿಗೆ ಬಂದಿದೆ. ರಂಜಾನ್ ಸಮಯದಲ್ಲಿ ದೇವಾಲಯದ ಮುಂಭಾಗ ಮುಸ್ಲಿಮರು ಮೆರವಣಿಗೆ ಹೋಗಬಹುದು. ಆದರೆ ಹಿಂದೂಗಳು ಮಸೀದಿ ಮುಂಭಾಗ ಮೌನವಾಗಿ ಇರಬೇಕು. ಕಾಂಗ್ರೆಸ್ ಅಧಿಕಾರದಲ್ಲೇ ಇದ್ದರೆ, ರಾಜ್ಯದೊಳಗೆ ಹಲವು ಪಾಕಿಸ್ತಾನಗಳು ಉದ್ಭವವಾಗುತ್ತದೆ ಎಂದು ಕಿಡಿ ಕಾರಿದ್ದರು.
ಕಾಂಗ್ರೆಸ್ನ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಇಂತಹ ಗಲಭೆಗಳನ್ನು ಮಾಡಿಸಿ ಮುಸ್ಲಿಮರನ್ನು ಸೆಳೆಯಲು ಕಾಂಗ್ರೆಸ್ ಸರ್ಕಾರ ಅವರಿಗೆ ಬೆಂಬಲವಾಗಿ ನಿಂತಿದೆ. ಮೆರವಣಿಗೆ ಸಮಯದಲ್ಲೇ ಹೆಚ್ಚು ಪೊಲೀಸರನ್ನು ನಿಯೋಜಿಸಬೇಕಿತ್ತು. ಅದನ್ನು ಸರ್ಕಾರ ಮಾಡಲೇ ಇಲ್ಲ. ಮಾಡಿದ್ದರೆ ಇಂತಹ ಅನಾಹುತ ಆಗುತ್ತಿರಲಿಲ್ಲ. ಕಾನೂನು ಸುವ್ಯವಸ್ಥೆ ಹಾಳಾಗಿರುವುದರಿಂದ ಇಡೀ ದೇಶ ಇತ್ತ ಕಡೆ ನೋಡುತ್ತಿದೆ. ನಾವ್ಯಾರೂ ಬರಲಿಲ್ಲ ಎಂದರೆ ಮುಸ್ಲಿಮರು ಮನೆಗಳಿಗೆ ಹೋಗಿ ಹೊಡೆಯುತ್ತಾರೆ ಎಂದಿದ್ದರು.