ಅವಧಿಗೂ ಮುನ್ನವೇ ಆರಂಭವಾದ ಮುಂಗಾರು ಮಳೆಯ ಅಬ್ಬರದಿಂದ ರಾಜ್ಯದ ಬಹುತೇಕ ಜಲಾಲಯಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಕಾವೇರಿ ಜಲನಯನ ಪಾತ್ರವಾದ ಮಡಿಕೇರಿ ಮುಂತಾದ ಪ್ರದೇಶಗಳಲ್ಲಿ ಸತತವಾಗಿ ದಾಖಲೆ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಕೆಆರ್ ಎಸ್ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್ ಎಸ್ ಜಲಾಶಯಕ್ಕೆ ಕಳೆದ ಮೂರು ದಿನಗಳಲ್ಲಿ 9 ಅಡಿಯಷ್ಟು ನೀರು ಹರಿದು ಬಂದಿದೆ. ಇದರಿಂದ ಗರಿಷ್ಠ 128 ಅಡಿ ಎತ್ತರವಿರುವ ಕೆಆರ್ ಎಸ್ ನಲ್ಲಿ 92 ಅಡಿಯಷ್ಟು ನೀರು ತುಂಬಿದೆ.
ಗುರುವಾರ ಬೆಳಿಗ್ಗೆ ಕೆಆರ್ ಎಸ್ ಗೆ 22 ಸಾವಿರ ರೂ ಕ್ಯೂಸೆಕ್ಸ್ ನೀರು ಒಳಹರಿವು ಇದ್ದು, 622 ಕ್ಯೂಸೆಕ್ಸ್ ನೀರು ಹೊರಗೆ ಬಿಡಲಾಗುತ್ತಿದೆ. ಇದೇ ರೀತಿ ನೀರು ಹರಿದು ಬಂದರೆ ಕೆಲವೇ ದಿನಗಳಲ್ಲಿ ಕೆಆರ್ ಎಸ್ ಭರ್ತಿಯಾಗಲಿದೆ. ಇದರಿಂದ ತಮಿಳುನಾಡು ಮತ್ತು ಕರ್ನಾಟಕ ನಡುವಿನ ಕಾವೇರಿ ವಿವಾದ ಈ ಬಾರಿಯೂ ಭುಗಿಲೇಳದೇ ಎರಡೂ ರಾಜ್ಯಗಳ ರೈತರು ನೆಮ್ಮದಿಯಿಂದ ಇರಬಹುದಾಗಿದೆ.
ಆಲಮಟ್ಟಿ ಡ್ಯಾಂಗೂ ಒಳಹರಿವು ಹೆಚ್ಚಳ
ವಿಜಯಪುರದ ನಿಡಗುಂದಿ ತಾಲೂಕಿನ ಬಳಿ ಇರುವ ಉತ್ತರ ಕರ್ನಾಟಕದ ಭಾಗದ ಜೀವನದಿ ಅಲಮಟ್ಟಿ ಜಲಾಶಯಕ್ಕೆ ಕೂಡ ಒಳಹರಿವು ಹೆಚ್ಚಾಗಿದೆ. ಮಹಾರಾಷ್ಟ್ರ ಮುಂತಾದ ಕಡೆ ಭಾರೀ ಮಳೆಯಾಗುತ್ತಿರುವುದರಿಂದ ಅಲಮಟ್ಟಿ ಜಲಾಶಯಕ್ಕೆ 60,379 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, 530 ಕ್ಯೂಸೆಕ್ಸ್ ನೀರು ಹೊರಗೆ ಬಿಡಲಾಗುತ್ತಿದೆ. ಅಲಮಟ್ಟಿ ಜಲಾಶಯ 519.60 ಗರಿಷ್ಠ ಎತ್ತರ ಹೊಂದಿದ್ದು, ಈಗಾಗಲೇ 512.78 ಅಡಿಯಷ್ಟು ನೀರು ಸಂಗ್ರಹವಾಗಿದೆ.
ಲಿಂಗನಮಕ್ಕಿ ಜಲಾಶಯದಲ್ಲಿ 33.29 ಟಿಎಂಸಿ ನೀರು ಸಂಗ್ರಹವಾಗಿದ್ದು, ಕಳೆದ ವರ್ಷದಲ್ಲಿ ಇದೇ ಅವಧಿಯಲ್ಲಿ 15 ಟಿಎಂಸಿಯಷ್ಟು ನೀರು ಸಂಗ್ರಹವಾಗಿತ್ತು.