ಕರೂರಿನಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ನಟ ವಿಜಯ್ ನೇತೃತ್ವದ ಬೃಹತ್ ರ್ಯಾಲಿ ವೇಳೆ ನೂಕುನುಗ್ಗಲು ಉಂಟಾಗಿ 41 ಜನ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವೆಟ್ರಿ ಕಳಗಂನ ಜಿಲ್ಲಾ ಕಾರ್ಯದರ್ಶಿ ಮಥಿಯಜಗನ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಲ್ತುಳಿತದಲ್ಲಿ 41 ಮಂದಿ ಅಸು ನೀಗಿದ್ದು, 60 ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ನ್ಯಾಯಹಾಧೀಶೆಯ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿದ್ದು, ತನಿಖೆ ಆರಂಭವಾದ ಮೊದಲ ದಿನವೇ ಒಬ್ಬರ ಬಂಧನ ನಡೆದಿದೆ. ಕರೂರ್-ದಿಂಡಿಗಲ್ ಗಡಿಯ ಬಳಿ ಅವರನ್ನು ಬಂಧಿಸಲಾಗಿದೆ. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಬುಸ್ಸಿ ಆನಂದ್ ಮತ್ತು ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ನಿರ್ಮಲ್ ಕುಮಾರ್ ಹೆಸರು ಕೂಡ ಎಫ್ಐಆರ್ನಲ್ಲಿ ದಾಖಲಾಗಿದೆ.
ಪ್ರಕರಣದಲ್ಲಿ ದಾಖಲಾಗಿರುವ ಎಫ್ಐಆರ್ ಪ್ರಕಾರ, ಅಧಿಕಾರಿಗಳು ಘಟನೆಯ ಹೊಣೆಯನ್ನು ಪಕ್ಷ ಮತ್ತು ನಟ-ರಾಜಕಾರಣಿ ವಿಜಯ್ ಮೇಲೆ ಹೊರಿಸಿದ್ದಾರೆ. ಕರೂರ್ ರ್ಯಾಲಿಗೆ ವಿಜಯ್ 6 ಗಂಟೆ ತಡವಾಗಿ ಬಂದಿದ್ದು, ಜನಸಂದಣಿ ಹೆಚ್ಚಾಯಿತು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಜನರು ನಟನನ್ನು ನೋಡಲು ಉಕ್ಕಿನ ಶೆಡ್ ಗಳು ಮತ್ತು ಮರಗಳ ಮೇಲೆ ಹತ್ತಿದ್ದರು. ಅವು ಕುಸಿದು ಅವು ಕೆಳಗಿದ್ದವರ ಮೇಲೆ ಬಿದ್ದಾಗ ಕಾಲ್ತುಳಿತ ಸಂಭವಿಸಿತು ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ. ರ್ಯಾಲಿ ವೇಳೆ ನೂಕುನುಗ್ಗಲು ಉಂಟಾಗಿ 30ಕ್ಕೂ ಹೆಚ್ಚು ಜನ ಮೃತಪಟ್ಟ ಬಳಿಕ ದಳಪತಿ ವಿಜಯ್ ನಿವಾಸಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ಪ್ರಕರಣದ ತನಿಖೆಗೆ ಆಗ್ರಹ ಹೆಚ್ಚಾಗಿದೆ.
ರ್ಯಾಲಿಯಲ್ಲಿ ನಡೆದ ಭೀಕರ ಕಾಲ್ತುಳಿತ ದುರಂತ ನಡೆದು ಎರಡು ದಿನಗಳ ಬಳಿಕ ಪಕ್ಷದ ಕಾರ್ಯಕರ್ತ ವಿರ್ಪಟ್ಟು ಗ್ರಾಮ ಶಾಖೆಯ ಕಾರ್ಯದರ್ಶಿ ಅಯ್ಯಪ್ಪನ್ (52) ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಅವರು ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ದುರಂತದಿಂದ ತನಗೆ ನೋವಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪೊಲೀಸರು ಸೂಕ್ತ ವ್ಯವಸ್ಥೆಗಳನ್ನು ಒದಗಿಸಿಲ್ಲ ಎಂದು ಆರೋಪಿಸಿ ಪತ್ರ ಬರೆದಿಟ್ಟಿದ್ದಾರೆ.