ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಪ್ರತಿ ವರ್ಷದಂತೆ ಜಾತ್ರಾ ಮಹಾದಾಸೋಹದಲ್ಲಿ ಈ ವರ್ಷವೂ ಜಾತ್ರಾ ಮಹೋತ್ಸವದ ಎರಡನೇ ದಿನ ಮಂಗಳವಾರ ಉತ್ತರ ಕರ್ನಾಟಕದ ವಿಶೇಷ ಖಾದ್ಯವಾದ ಮಿರ್ಚಿ ವಿತರಿಸಲಾಯಿತು.
ಮಿರ್ಚಿ ತಯಾರಿಕೆಗೆ 25 ಕ್ವಿಂಟಾಲ್ ಹಸೆ ಹಿಟ್ಟು, 12 ಬ್ಯಾರಲ್ ಎಣ್ಣೆ, 22 ಕ್ವಿಂಟಾಲ್ ಮೆಣಸಿನಕಾಯಿ, ರುಚಿಗೆ ತಕ್ಕಂತೆ ಅಜಿವಾನ, ಸಣ್ಣ ಉಪ್ಪು, ಸೊಡಾಪುಡಿ ಬಳಸಲಾಗಿದೆ.
ಮಿರ್ಚಿ ತಯಾರಿಕೆಗೆ ಐವತ್ತು ಜನರ ನಾಲ್ಕು ತಂಡದಂತೆ ಒಟ್ಟು 400 ಜನ ಬಾಣಸಿಗರು ಹಾಗೂ ಅವರಿಗೆ 150 ಜನ ಸಹಾಯ ಮಾಡುವ ಮೂಲಕ ಮಿರ್ಚಿ ತಯಾರಿಕೆಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಒಟ್ಟು 6 ಲಕ್ಷ ಮಿರ್ಚಿಗಳನ್ನು ವಿವಿಧ ಗ್ರಾಮದ ಬಾಣಸಿಗರು ಆಗಮಿಸಿ ತಯಾರಿಸುವುದರ ಮೂಲಕ ಸೇವೆಗೈದರು.
ಸಂಸ್ಥಾನ ಶ್ರೀಗವಿಮಠದ ಪರಮಪೂಜ್ಯ ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ದಾಸೋಹದಲ್ಲಿ ಮಿರ್ಚಿ ತಯಾರಿಕಾ ಸ್ಥಳಕ್ಕೆ ಆಗಮಿಸಿ ಆಶೀರ್ವದಿಸಿದರು. ಜೊತೆಗೆ ಕೆಲವು ಮಿರ್ಚಿಗಳನ್ನು ಅವರೇ ಕೈಯಾರೆ ತಯಾರಿಸಿದರು. ಭಕ್ತರ ಹಸಿವು ನೀಗಿಸುವ ಶ್ರೀಗಳ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.


