ಬೆಂಗಳೂರು: ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ ಗೆ ಒಂದರ ಹಿಂದೆ ಒಂದರಂತೆ ಸಂಕಷ್ಟಗಳು ಎದುರಾಗುತ್ತಿದ್ದು, ಸಂಜು ಮತ್ತು ಗೀತಾ-2 ಚಿತ್ರ ತಂಡದ ದೂರಿನ ನಂತರ ಇದೀಗ ಮತ್ತೊಂದು ಚಿತ್ರ ತಂಡ ನಟಿ ವಿರುದ್ಧ ಫಿಲ್ಮ್ ಚೇಂಬರ್ ಗೆ ದೂರು ನೀಡಿದೆ.
ಸಂಜು ಮತ್ತು ಗೀತಾ-2 ಚಿತ್ರದ ಪ್ರಚಾರಕ್ಕೆ ಬಾರದೇ ರಚಿತಾ ರಾಮ್ ಸಹಕಾರ ನೀಡಿಲ್ಲ ಎಂದು ನಿರ್ದೇಶಕ ನಾಗಶೇಖರ್ ಸೇರಿದಂತೆ ಚಿತ್ರ ತಂಡ ಫಿಲ್ಮ್ ಚೇಂಬರ್ ಗೆ ದೂರು ಸಲ್ಲಿಸಿತ್ತು.
ಇದೀಗ ಉಪ್ಪಿ ರುಪ್ಪಿ ಚಿತ್ರದ ನಿರ್ಮಾಪಕ ವಿಜಯಲಕ್ಷ್ಮೀ ರಚಿತಾ ರಾಮ್ ಫಿಲ್ಮ್ ಚೇಂಬರ್ ಗೆ ದೂರು ನೀಡಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
2016ರಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಉಪ್ಪಿ-ರುಪ್ಪಿ ಚಿತ್ರದಲ್ಲಿ ನಟಿಸಲು 23 ಲಕ್ಷ ರೂ. ಸಂಭಾವನೆ ನಿಗದಿಯಾಗಿದ್ದು, 13 ಲಕ್ಷ ರೂ. ಮುಂಗಡ ಹಣ ನೀಡಲಾಗಿದೆ. ಆದರೆ ಇದುವರೆಗೂ ಮುಂಗಡ ಹಣ ನೀಡದೇ ಚಿತ್ರದಲ್ಲಿ ನಟಿಸದೇ ರಚಿತಾ ರಾಮ್ ವಂಚಿಸಿದ್ದಾರೆ. ಅವರಿಂದಾಗಿ ಸಿನಿಮಾ ಕೂಡ ಅರ್ಧದಲ್ಲೇ ನಿಂತು ಹೋಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
2016ರಲ್ಲಿ ಉಪೇಂದ್ರ ಮತ್ತು ರಚಿತಾ ರಾಮ್ ಜೊತೆಯಾಗಿ ಉಪ್ಪಿ- ರುಪ್ಪಿ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ ಇದಕ್ಕೂ ಮುನ್ನ ಇದೇ ನಾಯಕ ನಟನ ಜೊತೆ ನಟಿಸಿದ್ದ ರಚಿತಾ ರಾಮ್, ಒಂದು ದಿನದ ಮಟ್ಟಿಗೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ನಂತರ ಬರಲೇ ಇಲ್ಲ ಎಂದು ದೂರಿನಲ್ಲಿ ನಿರ್ಮಾಪಕರು ಆರೋಪಿಸಿದ್ದರು.
ವಿಜಯ ಲಕ್ಷ್ಮೀ ನಿರ್ಮಿಸಿ ಕೆ. ಮಾದೇಶ ನಿರ್ದೇಶನದ ಚಿತ್ರ 2017ರಲ್ಲಿ ಬ್ಯಾಂಕಾಂಕ್ ನಲ್ಲಿ ಶೂಟಿಂಗ್ ನಡೆಸಬೇಕಾಗಿತ್ತು. ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿ ತಮಗೆ ಒಂದು ಕೊಠಡಿ ಮೀಸಲು ಇಡುವಂತೆಯೂ ಹೇಳಿದ್ದರು. ಆದರೆ ಚಿತ್ರೀಕರಣಕ್ಕೆ ಬಾರದೇ 15 ದಿನಗಳ ಕಾಲ ಸತಾಯಿಸಿದರು. ಇದರಿಂದ ಚಿತ್ರೀಕರಣ ನಡೆಯದೇ ಸಿನಿಮಾ ಅರ್ಧದಲ್ಲೇ ನಿಂತು ಹೋಯಿತು ಎಂದು ಆರೋಪಿಸೊಲಾಗಿದೆ.
ಫಿಲ್ಮ್ ಚೇಂಬರ್ ಗೆ 2 ತಿಂಗಳ ಹಿಂದೆಯೇ ರಚಿತಾ ರಾಮ್ ವಿರುದ್ಧ ದೂರು ನೀಡಲಾಗಿದೆ. ಅಲ್ಲದೇ ಮುಂಗಡ ಹಣ ವಾಪಸ್ ಕೊಡುವಂತೆ ಕೇಳಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಆರೋಪಿಸಲಾಗಿದ್ದು, ಫಿಲ್ಮ್ ಚೇಂಬರ್ ಈ ಬಗ್ಗೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.