ಬೆಂಗಳೂರು: ಮುಖ್ಯಮಂತ್ರಿಗಳ ವಿರುದ್ಧ 28 ಕೊಲೆ ಮಾಡಿರುವ ಆರೋಪವು ವಿಧಾನಸಭೆಯಲ್ಲಿ ಸೋಮವಾರ ಕಾವೇರಿದ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಧರ್ಮಸ್ಥಳದಲ್ಲಿ ಮೃತ ಬಾಲಕಿಯ ಪರ ಹೋರಾಟಗಾರರೊಬ್ಬರು ಮುಖ್ಯಮಂತ್ರಿ 28 ಕೊಲೆ ಮಾಡಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಇದರ ತನಿಖೆಗೆ ಎಸ್ಐಟಿ ರಚಿಸಬೇಕು ಎಂದು ಪ್ರತಿಪಕ್ಷದ ಸದಸ್ಯರು ಸದನದಲ್ಲಿ ಒತ್ತಾಯಿಸಿದರು.
ಈ ವೇಳೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ವ್ಯಕ್ತಿಯೊಬ್ಬ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಕೊಲೆ ಆರೋಪ ಮಾಡಿದ್ದಾನೆ. ಇದು ಅತ್ಯಂತ ಗಂಭೀರವಾದ ಆರೋಪ. ಸರ್ಕಾರ ಸುಮ್ಮನೆ ಕುಳಿತಿರುವುದು ನೋಡಿದರೆ ಕಣ್ಣು, ಕಿವಿ ಇಲ್ಲದಂತೆ ಕಾಣುತ್ತದೆ. ಈ ಬಗ್ಗೆ ತನಿಖೆ ನಡೆಸುತ್ತೀರಾ ಅಥವಾ ಮತ್ತೆ ಎಸ್ಐಟಿ ರಚಿಸುತ್ತೀರಾ? ಎಂದು ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯ ಸುನಿಲ್ ಕುಮಾರ್, ಇಷ್ಟೊಂದು ಗಂಭೀರ ಆರೋಪ ಕೇಳಿಬಂದಿದ್ದರೂ ಸರ್ಕಾರ ಮೌನವಾಗಿದೆ. ಇದಕ್ಕೆ ಉತ್ತರ ಕೊಡುತ್ತಿಲ್ಲ ಎಂದು ಹೇಳಿದರು.
ಶಾಸಕ ಸುರೇಶ್ ಕುಮಾರ್, ಸಿಎಂ ಮೇಲೆ ಧೈರ್ಯವಾಗಿ ಆರೋಪ ಮಾಡಿದ್ದಾನೆ ಆ ವ್ಯಕ್ತಿ, ಸರ್ಕಾರ ಇದನ್ನು ಹೇಗೆ ಸಹಿಸಿಕೊಳ್ಳುತ್ತದೆ ? ಸರ್ಕಾರ ಏಕೆ ಸುಮ್ಮನಿದೆ? ಎಂದು ಪ್ರಶ್ನಿಸಿದರು. ಈ ವೇಳೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿ, ಸರ್ಕಾರ ಸಮ್ಮನೆ ಕುಳಿತಿಲ್ಲ. ಸರ್ಕಾರ ಅಷ್ಟೊಂದು ಅಸಹಾಯಕ ಆಗಿದೆ ಅನ್ಕೊಂಡಿದ್ದೀರಾ? ಎಂದು ತಿರುಗೇಟು ಕೊಟ್ಟರು.
ಈ ವೇಳೆ ಸುನೀಲ್ ಕುಮಾರ್ ಮಾತನಾಡಿ, ದೇಶದ ನಂ.1 ಗೃಹ ಸಚಿವರು ಕ್ರಮ ತೆಗೆದುಕೊಳ್ಳಬೇಕು ಎಂದು ಕಾಲೆಳೆದರು. ಬಳಿಕ ಮಾತು ಮುಂದುವರಿಸಿದ ಪರಮೇಶ್ವರ್, ಆ ವ್ಯಕ್ತಿ ವಿರುದ್ಧ ಹಲವು ಕೇಸ್ ಇವೆ, ಆ ವ್ಯಕ್ತಿ ಹೆಸರು ಹೇಳಲ್ಲ. ಇಂಥ ವ್ಯಕ್ತಿಯನ್ನು ಸಮಾಜದಲ್ಲಿ ಹೀಗೇ ಸುಮ್ಮನೆ ಬಿಡಲ್ಲ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಸುರೇಶ್ ಕುಮಾರ್ ಸೇರಿದಂತೆ ಹಲವು ಸದಸ್ಯರು ಆ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.
ಈ ಮಧ್ಯೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ವಿರುದ್ಧ ಆರೋಪ ಮಾಡಿರುವ ವಿಡಿಯೋ ನಾನು ನೋಡಿದ್ದೇನೆ, ಕೇಳಿದ್ದೇನೆ. ಸಿಎಂ ಮೇಲೆ ಕೊಲೆ ಆರೋಪ ಮಾಡಿದ್ದಾರೆ ಎನ್ನುವ ನಂಬರಿನ ವಿವರ ನನ್ನ ಮೊಬೈಲ್ನಲ್ಲಿ ಇದೆ. ಆ ವ್ಯಕ್ತಿ ಕೇವಲ ಸಿಎಂ ಬಗ್ಗೆ ಹೇಳಿಲ್ಲ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಗ್ಗೆಯೂ ಆರೋಪ ಮಾಡಿದ್ದಾನೆ. ಆದರೆ, ಸದನದಲ್ಲಿ ಅಂತವರ ಹೆಸರು ಪ್ರಸ್ತಾಪಿಸಿ ನಾಯಕನಂತೆ ವಿಜೃಂಭಿಸಬೇಡಿ ಎಂದರು.
ಶಾಸಕ ಶಿವಲಿಂಗೇಗೌಡ ಅವರು ಕೆಲ ಹೆಸರುಗಳನ್ನು ಪ್ರಸ್ತಾಪಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭದಲ್ಲಿ ಈ ಹೇಳಿಕೆ ಗಮನಿಸಿರಲಿಲ್ಲ. ಬಳಿಕ ವಿಷಯವನ್ನು ಅವರಿಗೆ ತೋರಿಸಿ ತಿಳಿಸಲಾಯಿತು. ನಂತರ ಗೃಹ ಸಚಿವರು ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.