ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಿದ ಬಳಿಕ ಭಾರತವು ತನ್ನ 24 ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ವರದಿಗಳು ತಿಳಿಸಿವೆ. ಭಾರತೀಯ ವಿಮಾನಯಾನ ಸಂಸ್ಥೆಗಳು ಪ್ರಯಾಣ ಸಲಹೆಗಳನ್ನು ನೀಡಿದ್ದು, ಅದಕ್ಕೆ ಅನುಗುಣವಾಗಿ ಪ್ರಯಾಣಿಕರು ಪ್ರಯಾಣದ ಯೋಜನೆಯನ್ನು ಪ್ಲ್ಯಾನ್ ಮಾಡಿಕೊಳ್ಳುವಂತೆ ಸೂಚಿಸಿವೆ.
ದೇಶಾದ್ಯಂತ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇನ್ನೂ ದೇಶದ ರಾಜಧಾನಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಭದ್ರತೆ ಹೆಚ್ಚಿಸಿರುವ ಕಾರಣ ಕೆಲವು ವಿಮಾನಗಳ ಹಾರಾಟಗಳು ರದ್ದಾಗಿವೆ. ಪ್ರಯಾಣಿಕರು ತಮ್ಮ ವಿಮಾನ ಯಾನದ ಬಗ್ಗೆ ಮಾಹಿತಿ ತಿಳಿದುಕೊಂಡು ಏರ್ಪೋರ್ಟ್ಗೆ ಬರಲು ಸೂಚಿಸಲಾಗಿದೆ.
ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಿದ ಬಳಿಕ ಭಾರತ ʻಆಪರೇಷನ್ ಸಿಂಧೂರʼ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಿದೆ. ಪಾಕಿಸ್ತಾನದ ಮೇಲೆ ಭಾರತವು ಕ್ಷಿಪಣಿಗಳನ್ನು ಸುರಿದಿದೆ. ಎರಡೂ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಪಾಕಿಸ್ತಾನ ಸಶಸ್ತ್ರಪಡೆಗಳು ಮೇ 8 ಮತ್ತು 9ರ ಮಧ್ಯರಾತ್ರಿ ಇಡೀ ಪಶ್ಚಿಮ ಗಡಿಯಲ್ಲಿ ನಡೆಸಿದ ದಾಳಿಯನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಿರುವುದಾಗಿ ಭಾರತೀಯ ಸೇನೆ ಹೇಳಿದೆ.
ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ನಿವಾಸದ ಸಮೀಪದಲ್ಲೇ ಸ್ಫೋಟ ಸಂಭವಿಸಿದ್ದು, ಪ್ರಾಣಭಯದಲ್ಲಿ ಅವರು ಬಂಕರ್ ಸೇರಿಕೊಂಡಿದ್ದಾರೆ ಎಂದು ವರದಿ ಯಾಗಿದೆ. ಪಾಕ್ ರಾಜಧಾನಿ ಇಸ್ಲಾಮಾಬಾದ್ನಲ್ಲಿ ಶೆಹಬಾಜ್ ಶರೀಫ್ ಮನೆಯಿದೆ. ಆ ಮನೆಯಿಂದ 20 ಕಿಮೀ ದೂರ ಸ್ಫೋಟದ ಸದ್ದಾಗಿದೆ.