ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಹಿರಿಯ ಮ್ಯಾನೇಜರ್ ರಾಹುಲ್ ವಿಜಯ್ ಅವರನ್ನು 232 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಂಧಿಸಿದೆ.
232 ಕೋಟಿ ರೂ. ಸರ್ಕಾರದ ಹಣವನ್ನು ನೇರವಾಗಿ ತನ್ನ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ರಾಹುಲ್ ವಿಜಯ್ ವರ್ಗಾಯಿಸಿಕೊಂಡು ಬಳಿಕ ಆ ಮೊತ್ತವನ್ನು ಬ್ಯುಸಿನೆಸ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ ಎಂಬ ಆರೋಪವಿದೆ.
ಇದು ವರ್ಷದ ಅತಿದೊಡ್ಡ ಹಣಕಾಸು ಹಗರಣಗಳಲ್ಲಿ ಒಂದು ಎಂದು ತನಿಖಾತಂಡ ಅಧಿಕಾರಿಗಳು ಹೇಳಿದ್ದಾರೆ. 2019 ಮತ್ತು 2023 ಅವಧಿಯಲ್ಲಿ ಡೆಹ್ರಾಡೂನ್ ವಿಮಾನ ನಿಲ್ದಾಣದಲ್ಲಿ ವಿಜಯ್ ಕಾರ್ಯನಿರ್ವಹಿಸುತ್ತಿದ್ದಾಗ ನಡೆದ ಅಕ್ರಮಗಳ ಬಗ್ಗೆ ಎಎಐ ದೂರು ನೀಡಿದ ನಂತರ ತನಿಖೆ ಆರಂಭಿಸಲಾಗಿತ್ತು. ಅವರು ಡಿಜಿಟಲ್ ದಾಖಲೆಗಳನ್ನು ವ್ಯವಸ್ಥಿತವಾಗಿ ಜಾಣತನದಿಂದ ನಿರ್ವಹಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆ.28 ರಂದು ಜೈಪುರದಲ್ಲಿರುವ ವಿಜಯ್ ನಿವಾಸ ಮತ್ತು ಕಚೇರಿಯ ಮೇಲೆ ಸಿಬಿಐ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ತನಿಖೆ ಬಳಿಕ ಮತ್ತಷ್ಟು ವಿಚಾರಗಳು ತಿಳಿದುಬರಬೇಕಿದೆ.