ಕಾವೇರಿ ಮಾತೆಗೆ ಗಂಗಾರತಿ ಮಾದರಿಯಲ್ಲಿ ‘ಕಾವೇರಿ ಆರತಿ’ ನೆರವೇರಿಸುವ ಸಂಬಂಧ ರಾಜ್ಯ ಸರ್ಕಾರವು ಗುರುವಾರ ನಡೆದ ಸಚಿವ ಸಂಪುಟದಲ್ಲಿ 92 ಕೋಟಿ ರೂಪಾಯಿಯನ್ನು ಮೀಸಲಿಟ್ಟಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಇದಕ್ಕೆ ಕಾರಣರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ , ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲವರಾಯಸ್ವಾಮಿ, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ ಅವರನ್ನು ಕಾವೇರಿ ಪ್ರಾಂತ್ಯದ ಮಹಾಜನತೆ ಪರವಾಗಿ ಅಭಿನಂದಿಸುತ್ತೇನೆ ಎಂದು ವಿಧಾನ ಪರಿಷತ್ ಶಾಸಕರಾದ ದಿನೇಶ್ ಗೂಳಿಗೌಡ ಹೇಳಿದ್ದಾರೆ.
ದೇಶದ ಪುಣ್ಯ ನದಿಗಳಲ್ಲಿ ಕಾವೇರಿಯೂ ಒಂದು. ಅತ್ಯಂತ ಶ್ರೇಷ್ಠವಾದ ತಾಯಿ ಕಾವೇರಿಗೆ ಪೂಜೆ ಸಲ್ಲಿಸಲು ಈ ಅನುದಾನವನ್ನು ಬಳಸಿಕೊಳ್ಳಲಾಗುತ್ತದೆ. ಅಲ್ಲಿ ಕಾವೇರಿ ಆರತಿಗೆ ಸಂಬಂಧಪಟ್ಟಂತೆ ಎಲ್ಲ ಮೂಲಭೂತ ಸೌಕರ್ಯವನ್ನು ಕಲ್ಪಿಸಲು ಇಂದಿನ ಸಚಿವ ಸಂಪುಟವು 92 ಕೋಟಿ ರೂಪಾಯಿಗೆ ಅನುಮೋದನೆಯನ್ನು ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕಾವೇರಿ ಆರತಿಗಾಗಿ ಮನವಿ ಮಾಡಿದ್ದ ಶಾಸಕರು: ಗಂಗಾರತಿ ಮಾದರಿಯಲ್ಲಿ ಕರ್ನಾಟಕದಲ್ಲಿ ಕಾವೇರಿ ಆರತಿ ಮಾಡುವ ಸಂಬಂಧ ಈ ಹಿಂದೆ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ ಮತ್ತು ದಿನೇಶ್ ಗೂಳಿಗೌಡ ಅವರು ಸಿಎಂ, ಡಿಸಿಎಂಗೆ ಮನವಿ ಮಾಡಿದ್ದರು.