ಭಾರತದ ವಾಯುಪಡೆಯು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮೂಲಕ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳ ಮೇಲೆ ನಡೆಸಿದ ಪ್ರತೀಕಾರದ ದಾಳಿಯಲ್ಲಿ 100 ಉಗ್ರರು ಹತರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಪ್ರತಿಪಕ್ಷಗಳಿಗೆ ಮಾಹಿತಿ ನೀಡಿದೆ. ಸಂಸತ್ ಭವನದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಕಂಪನಿ ನಿರ್ಮಿಸಿದ ಸೂಸೈಡ್ ಡ್ರೋನ್: ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಬೆಂಗಳೂರಿನ ಕಂಪನಿ ನಿರ್ಮಿಸಿದ ಸೂಸೈಡ್ ಡ್ರೋನ್ ಗಳನ್ನು ಬಳಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಆಲ್ಫಾ ಡಿಸೈನ್ ಮತ್ತು ಇಸ್ರೇಲ್ನ ಎಲ್ಬಿಟ್ ಸೆಕ್ಯುರಿಟಿ ಸಿಸ್ಟಮ್ಸ್ ಜಂಟಿಯಾಗಿ ಇವನ್ನು ಅಭಿವೃದ್ಧಿಪಡಿಸಿದೆ.
ಯುಎಎಸ್ನಂತೆ (ಮಾನವರಹಿತ ವಿಮಾನ ವ್ಯವಸ್ಥೆ) ಹಾರುತ್ತದೆ ಮತ್ತು ಕ್ಷಿಪಣಿಯಂತೆ ಇದು ಹೊಡೆದು ಹಾಕುತ್ತದೆ. ದೂರದಲ್ಲೇ ಸ್ಕೈಸ್ಟ್ರೈಕರ್ ನಿಯಂತ್ರಣ ಮಾಡಬಹುದಾಗಿರುವ ಕಾರಣ ಸುಲಭವಾಗಿ ಗಡಿಯನ್ನು ದಾಟಿ ಉಗ್ರರ ನೆಲೆಗಳ ಮೇಲೆ ಅಪ್ಪಳಿಸಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ನೆಲೆಗಳು ಧ್ವಂಸ ಗೊಂಡಿವೆ. ವಿಮಾನದ ಮಾದರಿಯಲ್ಲಿರುವ ಈ ಡ್ರೋನ್ 100 ಕಿಮೀ ದೂರದಲ್ಲಿರುವ ಗುರಿಯಯನ್ನು ಧ್ವಂಸ ಮಾಡುವುದರ ಜೊತೆಗೆ 5 ಕೆಜಿ ಅಥವಾ 10 ಕೆಜಿ ಸಿಡಿತಲೆಯನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ. ಕಡಿಮೆ ಎತ್ತರದಲ್ಲಿ ಹಾರುವ ಮೂಲಕ ನಿಖರ ಗುರಿಯನ್ನು ತಲುಪುತ್ತದೆ.
ಈ ನಡುವೆ ಪಾಕಿಸ್ತಾನವು ಭಾರತದ ಮೇಲೆ ಪ್ರಯೋಗಿಸಿದ ಕ್ಷಿಪಣಿಯನ್ನು ಅರ್ಧದಲ್ಲೇ ಧ್ವಂಸ ಮಾಡಲಾಗಿದೆ. ಪಂಜಾಬ್ನ ಅಮೃತಸರವನ್ನು ಗುರಿಯಾಗಿಸಿ ಬುಧವಾರ ರಾತ್ರಿ ಕ್ಷಿಪಣಿ ದಾಳಿ ನಡೆಸಲಾಗಿತ್ತು. ಭಾರತದಲ್ಲಿರುವ ಮುಂದುವರಿದ ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ತಕ್ಷಣವೇ ಪಾಕಿಸ್ತಾನದ ಕ್ಷಿಪಣಿಯನ್ನು ಆಕಾಶ ದಲ್ಲಿಯೇ ನಾಶಪಡಿಸಿದೆ.