ಟಿ-20 ವಿಶ್ವಕಪ್ ನಲ್ಲಿ ಭಾರತ ಪಾಕಿಸ್ತಾನವನ್ನು ಫೆ. 15 ರಂದು ಎದುರಿಸುತ್ತಿದೆ. ಪೆಹಲ್ಗಾಮ್ ನಲ್ಲಿ ಭಯೋತ್ಪಾದಕರ ದಾಳಿಗೆ 26 ಜನ ಪ್ರಾಣ ತೆತ್ತಿದ್ದಾರೆ. ಅವರ ಮನೆಯವರ ಕಣ್ಣೀರು ಇನ್ನೂ ಆರಿಲ್ಲ. ಹೀಗಿರುವಾಗ ಅವರ ವಿರುದ್ದ ಪಂದ್ಯ ಆಡುವುದು ಸರಿಯಲ್ಲ. ಇದು ಮೋಸದ ಆಟವಾಗಿದೆ. ದೇಶಾಭಿಮಾನ ಬಿಟ್ಟು ಹೆಣಗಳ ಮೇಲೆ ಕ್ರಿಕೆಟ್ ಆಡುವುದು ಸರಿಯಲ್ಲ. ಭಾರತೀಯರು ಫೆಬ್ರುವರಿ 15 ರಂದು ನಡೆಯುವ ಪಂದ್ಯವನ್ನು ಯಾರೂ ವೀಕ್ಷಿಸಬಾರದು ಎಂದು ಶ್ರೀರಾಮ್ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಗದಗ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಂದೇ ಮಾತರಂ ಗೀತೆ ರಚನೆಯಾಗಿ 150 ವರ್ಷ ಗತಿಸಿದ ಹಿನ್ನಲೆಯಲ್ಲಿ ರಾಷ್ಟ್ರಗೀತೆಯ ಜೊತೆಗೆ ಪ್ರತಿನಿತ್ಯ ವಂದೇ ಮಾತರಂ ಗೀತೆಯನ್ನು ಕಡ್ಡಾಯಗೋಳಿಸಿದ ಎನ್ನುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಶ್ರೀರಾಮ ಸೇನೆ ಸ್ವಾಗತಿಸುತ್ತದೆ ಎಂದರು.
ವಂದೇ ಮಾತರಂ ಗೀತೆಯಲ್ಲಿ ಭಾರತದ ವರ್ಣನೆಯಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳು ವಂದೇ ಮಾತರಂ ಹೇಳುತ್ತಾ ಲಾಠಿ ಏಟು ತಿಂದಿದ್ದಾರೆ. ಮುಸ್ಲಿಂ ಓಲೈಕೆಗಾಗಿ ಕಾಂಗ್ರೆಸ್ ಈ ಗೀತೆಯನ್ನು ತುಂಡರಿಸಿ ದೇಶದ್ರೋಹಿ ಕೆಲಸ ಮಾಡಿದೆ. ಮುಂಬುರವ ದಿನಗಳಲ್ಲಿ 150 ಜನರ ತಂಡ ರಚಿಸಿ ಸಾಮೂಹಿಕ ವಂದೇ ಮಾತರಂ ಗೀತೆಯನ್ನು ಶ್ರೀರಾಮ ಸೇನೆಯಿಂದ ಹಾಡಿಸಲಾಗುವುದು ಎಂದು ಹೇಳಿದರು.
ಫೆ. 14 ರಂದು ನಡೆಯುವ ಪ್ರೇಮಿಗಳ ದಿನಾಚರಣೆಯನ್ನು ಹಿಂದಿನಿಂದಲೂ ನಾವು ವಿರೋಧಿಸುತ್ತಾ ಬಂದಿದ್ದೇವೆ. ಪ್ರೇಮಿಗಳ ದಿನಾಚರಣೆ ನೆಪದಲ್ಲಿ ಡ್ರಗ್ಸ್ ಮಾಫೀಯಾ, ಯುವತೀಯರ ಅತ್ಯಾಚಾರ, ಕುಡಿತ, ಅಪಹರಣ ಹೆಚ್ಚುತ್ತಿವೆ. ಇಂತಹ ವಿಕೃತಿ ಕಂಡು ಬಂದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ವೀಕ್ಷಣೆ ಮಾಡಲಿದ್ದಾರೆ ಎಂದು ಎಚ್ಚರಿಸಿದರು.
ಬಾಂಗ್ಲಾದೇಶದಲ್ಲಿ ಹಿಂದೂಗಳ ಕೊಲೆ, ಅತ್ಯಾಚಾರ ನಡೆಯುತ್ತಿದೆ. ಕೇಂದ್ರ ಸರ್ಕಾರ ಕೈ ಕಟ್ಟಿ ಕುಳಿತಿರುವುದು ಸರಿಯಾದ ಕ್ರಮವಲ್ಲ. ಭಾರತದಲ್ಲಿ ಸುಮಾರು 5 ಕೋಟಿಗೂ ಅಧಿಕ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದು, ಕರ್ನಾಟಕದಲ್ಲಿ 15 ರಿಂದ 20 ಲಕ್ಷ ಅಕ್ರಮ ವಲಸಿಗರು ನೆಲೆಸಿದ್ದಾರೆ. ಕೂಡಲೇ ಅವರನ್ನು ದೇಶದಿಂದ, ರಾಜ್ಯದಿಂದ ಓಡಿಸಬೇಕು. ಚಾಮರಾಜಪೇಟೆಯಲ್ಲಿ 25 ಸಾವಿರ ಬಾಂಗ್ಲಾ ಮುಸ್ಲಿಮರು, ರೋಹಿಂಗ್ಯಾ ಮುಸ್ಲಿಮರು ಇದ್ದು, ಅವರನ್ನು ಮತ ಬ್ಯಾಂಕ್ ಆಗಿ ಜಮ್ಮಿರ್ ಅಹ್ಮದ್ ಪರಿವರ್ತನೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕದಲ್ಲಿ ಲವ್ ಜಿಹಾದ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಲವ್ ಜಿಹಾದ್ ನಿಂದ ಯುವತಿಯರು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಶ್ರೀರಾಮ ಸೇನೆಯಿಂದ ಸಹಾಯವಾಣಿ ತೆರೆದಿದ್ದು, ಪ್ರತಿದಿನ ನಾಲ್ಕೈದು ಲವ್ ಜಿಹಾದ್ ದೂರುಗಳು ಬರುತ್ತಿವೆ. ಪಾಲಕರು ಮಕ್ಕಳಿಗೆ ಸಂಸ್ಕಾರ ನೀಡಬೇಕು. ಮಠಾಧೀಶರು ಪ್ರವಚನ ಮೂಲಕ ಸಮಾಜವನ್ನು ಎಚ್ಚರಿಸಿಬೇಕಿದೆ ಎಂದು ಶ್ರೀರಾಮ ಸೇನೆ ರಾಜ್ಯ ಗೌರವಾಧ್ಯಕ್ಷ ಶ್ರೀ ಸತ್ಯಪ್ರಮೋದೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.


