ಆರ್ಸಿಬಿ ವಿಜಯೋತ್ಸವ ವೇಳೆ ನಡೆದ ದುರಂತ ಕುರಿತು ತನಿಖೆ ನಡೆಯುತ್ತಿದೆ, ಲೋಪದೋಷವಾಗಿದ್ದರೆ ಸತ್ಯಾಸತ್ಯತೆ ಹೊರಬರಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಲಬುರಗಿಯ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಯುವಕರ ಸಾವು ಯಾವುದೇ ಸರ್ಕಾರಕ್ಕೆ ಹೆಮ್ಮೆಯ ವಿಷಯವಲ್ಲ. ಬೆಂಗಳೂರಿನಲ್ಲಿ ನಡೆದ ಘಟನೆಯನ್ನು ಡಿಫೆಂಡ್ ಮಾಡುತ್ತಿಲ್ಲ. ಆರ್ ಸಿಬಿ, ಕೆಎಸ್ ಸಿಎ, ಹಾಗೂ ಬಿಸಿಸಿಐ ಪ್ಲಾನಿಂಗ್ ನಲ್ಲಿ ಲೋಪವಾಗಿದೆ. ಸರ್ಕಾರದ ಲೋಪ ಏನಾದರೂ ಆಗಿದ್ದರೆ ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಭದ್ರತೆಯ ದೃಷ್ಟಿಯಿಂದ ಸರ್ಕಾರ ವಿಕ್ಟರಿ ಪೆರೇಡ್ ಗೆ ನಿರಾಕರಣೆ ಮಾಡಿತ್ತು. ಆದರೆ ಬಿಜೆಪಿಯವರು ಇದಕ್ಕೆ ತಕರಾರು ತೆಗೆದು ಟ್ವೀಟ್ ಮಾಡಿ, ನಂತರ ಡಿಲೀಟ್ ಮಾಡಿದ್ದಾರೆ. ಈಗ ಘಟನೆ ನಡೆದು ಹೋಗಿದೆ. ಎಲ್ಲದರಲ್ಲೂ ರಾಜಕೀಯ ಮಾಡಬಾರದು, ಇದು ಸಮಯವಲ್ಲ. ಸರ್ಕಾರ ತನ್ನ ಜವಾಬ್ದಾರಿಯಿಂದ ಹಿಂದೆ ಸರಿದಿಲ್ಲ. ಸಾವಿಗೀಡಾದವರ ಮನೆಯವರಿಗೆ ಸಾಂತ್ವನ ಹೇಳಿದೆ. ಪರಿಹಾರ ಕೂಡಾ ಘೋಷಿಸಿದೆ. ಘಟನೆ ಕುರಿತಂತೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ. ಪೊಲೀಸ್ ಅಧಿಕಾರಗಳ ಸಸ್ಪೆಂಡ್ ಮಾಡಲಾಗಿದೆ ಎಂದರು.
ಗೃಹ ಸಚಿವರ ರಾಜೀನಾಮೆಗೆ ಬಿಜೆಪಿ ಒತ್ತಾಯಿಸುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲ ಘಟನೆಗಳಿಗೂ ಒಂದೇ ಮಾನದಂಡ ಅನ್ವಯ ಆಗಬೇಕು. ಪೆಹೆಲ್ಗಾಂ ನಲ್ಲಿ ಉಗ್ರರು ಜನರನ್ನು ಹತ್ಯೆ ಮಾಡಿ ಹೋಗಿದ್ದಾರೆ ಅವರು ಎಲ್ಲಿ ಹೋಗಿದ್ದಾರೆ. ಭಾರತದ ಒಳಗೆ ಇದ್ದಾರ ಅಥವಾ ಪಾಕಿಸ್ತಾನ ಕ್ಕೆ ಹೋಗಿದ್ದಾರ ಎನ್ನುವ ಮಾಹಿತಿ ಇಲ್ಲ. ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವರ, ವಿದೇಶಾಂಗ ಸಚಿವರ ರಾಜೀನಾಮೆಗೆ ಯಾರಾದರೂ ಒತ್ತಾಯಿಸಿದ್ದಾರೆಯೇ? ಎಂದು ಪ್ರಶ್ನಿಸಿದರು.
ವಿಧಾನಸೌಧದ ಮುಂದೆ ಸರ್ಕಾರ ಕಾರ್ಯಕ್ರಮ ಆಯೋಜಿಸಿತ್ತು. ಅಲ್ಲಿ ಆಟಗಾರರಿಗೆ ಸನ್ಮಾನ ಮಾಡುವುದು ತಪ್ಪಾ?. ಅಂತಹ ಕಾರ್ಯಕ್ರಮ ನಡೆದಾಗ ಯಾರಾದರೂ ಬರುತ್ತಾರೆ ಆಟಗಾರರೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಾರೆ. ಆದರೆ, ಆಟೋಗ್ರಾಫ್, ಫೋಟೋಗ್ರಾಫ್ ಹುಚ್ಚು ಇರುವುದು ಮೋದಿಗೆ ನಮಗಲ್ಲ ಎಂದು ತಿರುಗೇಟು ನೀಡಿದರು.
ಬಿಜೆಪಿ ನಾಯಕರು ರಾಜ್ಯಪಾಲರನ್ನು ಭೇಟಿಯಾಗುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್, ಬಿಜೆಪಿಯವರು ರಾಜ್ಯಪಾಲರನ್ನು ಭೇಟಿ ಮಾಡುವುದರಲ್ಲಿ ವಿಶೇಷವೇನಿಲ್ಲ. ಕಲಬುರಗಿಯ ವಿಚಾರದಲ್ಲಿಯೂ ಕೂಡಾ ಅವರು ರಾಜ್ಯಪಾಲರನ್ನು ಭೇಟಿ ಮಾಡಿದ್ದರು. ಬೆಂಗಳೂರು ಕಾಲ್ತುಳಿತ ಘಟನೆಯನ್ನು ರಾಜಕೀಯಗೊಳಿಸುತ್ತಿದ್ದಾರೆ. ಸಿಎಂ ಮಸಾಲೆ ದೋಸೆ ತಿನ್ನಲು ಹೋಗಿದ್ದಾರೆ ಎನ್ನುತ್ತಾರೆ. ಬಿಜೆಪಿಯವರು ಎಲ್ಲದಕ್ಕೂ ಮಸಾಲೆ ಹಾಕುತ್ತಾರೆ. ಅವರಿಗೆ ಪ್ರೌಢಿಮೆ ಇಲ್ಲ ಆದರೆ ನಮಗಿದೆ ಎಂದರು.
ಕಳೆದ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ ರೂ 341 ಕೋಟಿ ಬೆಳೆ ವಿಮೆ ಬಿಡುಗಡೆ ಮಾಡಲಾಗಿದೆ. ನಮ್ಮ ಸರ್ಕಾರ ಬಂದಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆ ಮಾಡಿಸಲು ಒತ್ತು ನೀಡಿದೆ. ಹಿಂದಿನ ಬಿಜೆಪಿ ಸರ್ಕಾರಕ್ಕೆ ಹೋಲಿಸಿದರೆ ಬೆಳೆ ವಿಮೆ ಮಾಡಿದ ರೈತರ ಸಂಖ್ಯೆ ಹೆಚ್ಚಿದೆ ಎಂದು ಸಚಿವರು ಹೇಳಿದರು. ಈ ಸಲ ಡಿಎಪಿ ಗೊಬ್ಬರ ತೊಂದರೆಯಾಗುವ ಸಾಧ್ಯತೆ ಇದೆ. ಯಾಕೆಂದರೆ ನಮ್ಮ ರಾಜ್ಯಕ್ಕೆ 42% ಮಾತ್ರ ಆಮದಾಗಿದೆ. ನಮ್ಮ ಪಾಲಿನಲ್ಲಿಯೂ ಕೇಂದ್ರ ಬಿಹಾರ ರಾಜ್ಯಕ್ಕೆ ಕಳಿಸಿದೆ. ಅಗತ್ಯವಾಗಿ ಬೇಕಾಗುವ ರಸಗೊಬ್ಬರ ಸರಬರಾಜಿಗೆ ಸಂಬಂಧಿಸಿದಂತೆ ಕೃಷಿ ಸಚಿವರು ಕೇಂದ್ರದ ಜೊತೆ ಮಾತನಾಡಿದ್ದಾರೆ ಎಂದರು.
ಜಿಲ್ಲೆಯಲ್ಲಿ ಮರುಳು ಕೊರತೆಯಾಗಿದೆ. ಸಧ್ಯ ದೊರಕುತ್ತಿರುವ ಮರುಳಿನ ಬೆಲೆ ಚಿನ್ನದ ಬೆಲೆಯಷ್ಟಾಗಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಸರ್ಕಾರ ಅಥವಾ ಖಾಸಗಿ ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಮರುಳು ದೊರಕಿಸಲು ಅಗತ್ಯ ಕ್ರಮ ವಹಿಸಲಾಗಿದೆ. ಏನಾದರೂ ಸಮಸ್ಯೆ ಇದ್ದರೆ ಅಧಿಕಾರಿಗಳೊಂದಿಗೆ ಮಾತನಾಡು ವುದಾಗಿ ಸಚಿವರು ಹೇಳಿದರು.
ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ಸಂಘದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ನೂತನ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಧಿಕಾರಿಗಳು ವರದಿ ಸಲ್ಲಿಸಲು ಕಾಲಾವಕಾಶ ಕೇಳಿದ್ದಾರೆ ಆದಷ್ಟು ಬೇಗ ವರದಿ ಬರಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಗರದ ಹೊರವಲಯದ ವಾಜಪೇಯಿ ಬಡಾವಣೆಯಲ್ಲಿ ಸುಮಾರು ರೂ 10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಐಎಎಸ್, ಐಪಿಎಸ್, ಕೆಎಎಸ್, ಬ್ಯಾಂಕಿಂಗ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ನೀಡುವ ತರಬೇತಿ ಕೇಂದ್ರ ವನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ವೀಕ್ಷಿಸಿದರು.