ಭಾರತವನ್ನು ಕಾಪಾಡಲು ನಾವೆಲ್ಲಾ ಒಂದಾಗಬೇಕಿದೆ : ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ
ಬೆಂಗಳೂರು : "ನಾವೆಲ್ಲಾ ಇಂದು ಭಾರತವನ್ನ, ಸಂವಿಧಾನ, ವೈವಿಧ್ಯಮಯ ಸಂಸ್ಕೃತಿಯನ್ನ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದೇವೆ. ದೇಶದಲ್ಲಿ ಭಯದ ವಾತಾವರಣ, ಹಿಂಸೆ ಹೆಚ್ಚಾಗಿದೆ. ಈ ಎಲ್ಲಾ ಸಂಕಷ್ಟಗಳ ವಿರುದ್ಧ ನಾವು ಒಂದಾಗಿ ಹೋರಾಡಬೇಕು" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕರೆ ನೀಡಿದರು. ನಗರದಲ್ಲಿ ನಡೆದ 31 ನೇ ವರ್ಷದ ಹುಸೇನ್ ದಿನಾಚರಣೆಯಲ್ಲಿ ಮಾತನಾಡಿ, "ಎಲ್ಲರೂ ಜೊತೆಗೂಡುವುದು ಆರಂಭ, ಜತೆಯಾಗಿ ಯೋಚನೆ ಮಾಡುವುದು ಪ್ರಗತಿ, ಒಂದಾಗಿ ಕೆಲಸ ಮಾಡುವುದು ಯಶಸ್ಸು. ಈ ಮಾತಿನ ಮೇಲೆ ನಂಬಿಕೆ ಇಟ್ಟು ನಾವೆಲ್ಲ ಮುಂದುವರೆಯೋಣ. ಮಹಾತ್ಮ ಗಾಂಧೀಜಿ ಅವರು ಹೇಳುತ್ತಾರೆ "ನಿನ್ನನ್ನು ನೀನು ನಿಯಂತ್ರಿಸಿಕೊಳ್ಳಲು ನಿನ್ನ ಮೆದುಳು ಉಪಯೋಗಿಸು, ಇನ್ನೊಬ್ಬರನ್ನು ನಿಯಂತ್ರಿಸಲು ಹೃದಯ ಬಳಸು" ಎಂದು ಹೇಳಿದ್ದಾರೆ. ನಾವು ಈ ದೇಶದಲ್ಲಿ ಸಹೋದರತ್ವ, ಸಹಬಾಳ್ವೆಯನ್ನು ಪ್ರೀತಿಯಿಂದ ಸ್ಥಾಪಿಸಬೇಕೆ ಹೊರತು ದ್ವೇಷದಿಂದಲ್ಲ. ನಾನು ಇಲ್ಲಿಗೆ ಮಾತನಾಡಲು ಬಂದಿಲ್ಲ ಇಲ್ಲಿಗೆ ಬಂದಿರುವ ಅನೇಕ ದಾರ್ಶನಿಕರ ಮಾತುಗಳನ್ನು ಕೇಳಲು ಬಂದಿದ್ದೇನೆ. ನಮ್ಮ ಬುದ್ದಿಗಳಿಗೆ ಆಗಾಗ ಚುರುಕು ಮುಟ್ಟಿಸುವ ಕೆಲಸ ಆಗಾಗ್ಗೆ ಆಗುತ್ತಿರಬೇಕು. ನಾನು ಈ ಸಂದರ್ಭದಲ್ಲಿ ಎಲ್ಲರಿಗೂ ವಾಗ್ದಾನ ನೀಡುತ್ತೇನೆ, ಈ ದೇಶವನ್ನ ಕೋಮುವಾದಿಗಳಿಂದ ಕಾಪಾಡುತ್ತೇವೆ, ಸಾಮರಸ್ಯದ ಬದುಕನ್ನು ಮತ್ತೊಮ್ಮೆ ಸ್ಥಾಪಿಸುತ್ತೇವೆ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಮಾರ್ಗದರ್ಶನದಲ್ಲಿ ಆಶ್ವಾಸನೆ ನೀಡುತ್ತೇವೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಹಾಗೂ ಕನ್ನಡಿಗರ ಭಾವನೆಗಳನ್ನು ಗೌರವಿಸಿ ಕೆಲಸ ಮಾಡುತ್ತದೆ. ಯಾವುದೇ ಕಾರಣಕ್ಕೂ ನಾವು ಇಲ್ಲಿನ ಜನರು ಭಯದಲ್ಲಿ ಬದುಕುವ ವಾತಾವರಣ ನಿರ್ಮಾಣ ಮಾಡಲು ಬಿಡುವುದಿಲ್ಲ.