ಬೀದಿ ನಾಯಿಗಳ ದಾಳಿಯ ಹಾನಿಗೆ ಆಯಾ ಗ್ರಾಮ ಪಂಚಾಯಿತಿಗಳೆ ಹೊಣೆ...!
ಬೆಳಗಾವಿ : ಗ್ರಾಮೀಣ ಪ್ರದೇಶದಲ್ಲಿ ಬೀದಿನಾಯಿ ದಾಳಿಯಿಂದ ಗಾಯಗೊಂಡ ವ್ಯಕ್ತಿಯ ಚಿಕಿತ್ಸಾ ವೆಚ್ಚವನ್ನು ಗ್ರಾಮ ಪಂಚಾಯತಿಗಳು ಪಾವತಿಸಬೇಕು ಹಾಗೂ ಸಂಬಂಧಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಬೇಕು ಹಾಗೂ ನಾಯಿ ದಾಳಿಯಲ್ಲಿ ವ್ಯಕ್ತಿ ಸಾವಿನ ಸಂದರ್ಭದಲ್ಲಿಯೂ ಸಹ ಎಂದು ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಬೀದಿನಾಯಿಗಳ ರಕ್ಷಣೆ, ಸಂತತಿ ನಿಯಂತ್ರಣ, ಬೀದಿನಾಯಿಗಳ ಚಿಕಿತ್ಸೆ ಮತ್ತು ಆರೈಕೆಗೆ ಸಂಬಂಧಿಸಿದಂತೆ ವಿವಿಧ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಇದರಲ್ಲಿ ಬೀದಿನಾಯಿ ಕಚ್ಚಿದ ವ್ಯಕ್ತಿಗಳ ಚಿಕಿತ್ಸಾ ವೆಚ್ಚವನ್ನು ಸಂಬಂಧಪಟ್ಟ ಗ್ರಾಮ ಪಂಚಾಯತಿಯವರು ಭರಿಸಬೇಕು. ಮೃತರಾದರೆ ಪರಿಹಾರ ನೀಡಬೇಕು ಎಂದೂ ಸ್ಪಷ್ಟಪಡಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ ಬೀದಿನಾಯಿ ದಾಳಿ ಪ್ರಕರಣದಲ್ಲಿ ಪರಿಹಾರ ಈ ಕೆಳಗಿನಂತಿರುತ್ತದೆ. ಬೀದಿನಾಯಿ ಕಚ್ಚಿದ ನಂತರ ಉಚಿತ ಚಿಕಿತ್ಸಾ ಸೌಲಭ್ಯ ದೊರೆಯದಿದ್ದಲ್ಲಿ ಕಡಿತದ ತೀವ್ರತೆಗೆ ಅನುಗುಣವಾಗಿ 2ರಿಂದ 3 ಸಾವಿರ ರೂ.ಗಳ ಪರಿಹಾರ ಹಾಗೂ ವೈದ್ಯಕೀಯ ಚಿಕಿತ್ಸಾ ವೆಚ್ಚ ರೂ.1ರಿಂದ 2 ಸಾವಿರ ನೀಡಬೇಕು. ದೊಡ್ಡ ನಾಯಿ ದಾಳಿಯಾದರೆ 10,000 ಪರಿಹಾರ ಮತ್ತು 5,000 ವೈದ್ಯಕೀಯ ವೆಚ್ಚವನ್ನು ನೀಡಬೇಕು. ನಾಯಿ ದಾಳಿಯಿಂದ ಮಗು ಮೃತಪಟ್ಟರೆ ಕುಟುಂಬಕ್ಕೆ 50 ಸಾವಿರ ಹಾಗೂ ದೊಡ್ಡವರಿಗೆ 1 ಲಕ್ಷ ಪರಿಹಾರ ನೀಡಬೇಕು. ಅದೇ ರೀತಿ ಸಾಯುವ ಮುನ್ನ ಮಾಡಿದ ಶವ ಸಂಸ್ಕಾರ ಹಾಗೂ ಚಿಕಿತ್ಸಾ ವೆಚ್ಚಕ್ಕೆ 5 ಸಾವಿರ ರೂ.ಗಳನ್ನು ಗ್ರಾಮ ಪಂಚಾಯಿತಿಯಿಂದ ನೀಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.