ಬೆಸ್ಕಾಂ ಉಪಕೇಂದ್ರದ ಎದುರು ತಮಟೆ ಚಳುವಳಿ-ಕ್ರಮಕ್ಕೆ ಆಗ್ರಹಿಸಿ ಧರಣಿ
ಕೋಲಾರ:- ತಾಲೂಕಿನ ಹುತ್ತೂರು ಹಾಗು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯದಿಂದಾಗಿ ರೈತರ ಬೆಳೆಗಳು ನಾಶವಾಗುತ್ತಿವೆ, ಮಕ್ಕಳ ಓದಿಗೂ ಸಂಚಕಾರ ಎದುರಾಗಿದೆ ಎಂದು ಆರೋಪಿಸಿ ಹುತ್ತೂರು ಹೋಬಳಿಯ ರೈತರು ಹಾಗೂ ಮುಖಂಡರು ಕೆಂಬೋಡಿ ಗ್ರಾಮದ ಬೆಸ್ಕಾಂ ಉಪ ಕೇಂದ್ರದ ಎದುರು ತಮಟೆ ಸಮೇತ ಪ್ರತಿಭಟನೆ ನಡೆಸಿದರು. ಕಳೆದ ಎರಡು ತಿಂಗಳಿಂದ ಅಘೋಷಿತ ಲೋಡ್ ಶೆಡ್ಡಿಂಗ್ನಿಂದಾಗಿ ರೈತರು ಸಾಲ ಮಾಡಿ ಹಾಕಿದ ಬೆಳೆಗಳು ನಾಶವಾಗುತ್ತಿವೆ,ವಿದ್ಯಾರ್ಥಿಗಳ ಓದಿಗೂ ಸಂಚಕಾರ ಎದುರಾಗಿದೆ, ಜನರ ಬದುಕು ಕತ್ತಲಲ್ಲಿ ಕಳೆಯಬೇಕಾದ ಪರಿಸ್ಥಿತಿ ಎದುರಾಗಿದ್ದು, ಕೂಡಲೇ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು. ವಿದ್ಯುತ್ ಸಮಸ್ಯೆ ಕುರಿತು ಬೆಸ್ಕಾಂ ಸಿಬ್ಬಂದಿಗೆ ಫೋನ್ ಮಾಡಿ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ವಿದ್ಯುತ್ ಲೋಡ್ ಶೆಡ್ಡಿಂಗ್ ನಿಂದ ಕೃಷಿ ಚಟುವಟಿಕೆಗೆ ಅಡಚಣೆ ಉಂಟಾಗಿದೆ, ಮಳೆ ಕೈಕೊಟ್ಟಿದ್ದು, ಬರದ ಛಾಯೆ ಆವರಿಸಿದೆ ಇಂತಹ ಸಂಕಷ್ಟದಲ್ಲಿ ಕೊಳವೆ ಬಾವಿಯ ನೀರಿನಿಂದ ಬೆಳೆ ಬೆಳೆಯಲು ಕರೆಂಟ್ ಅಡ್ಡಿಯಾಗಿದೆ ಎಂದು ಆರೋಪಿಸಿದರು. ಉಚಿತ ವಿದ್ಯುತ್ ನೀಡುವುದಾಗಿ ತಿಳಿಸಿರುವ ಸರ್ಕಾರ ಇರುವ ಕರೆಂಟ್ ಕಟ್ ಮಾಡಿ ಜನರನ್ನು ಕತ್ತಲಲ್ಲಿ ನೂಕಿದೆ, ಜನರ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ, ಈ ಪರಿಸ್ಥಿತಿ ಮುಂದುವರೆದರೆ ರೈತರು ಹಾಕಿರುವ ಬೆಳೆಗಳು ಹಾಳಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು. ವಿದ್ಯುತ್ ಸಮಸ್ಯೆ ತಿಳಿಸಿದರು ಇದುವರೆಗೂ ಬೆಸ್ಕಾಂ ಕಚೇರಿ ಸಿಬ್ಬಂದಿ ಸ್ಪಂದಿಸಿಲ್ಲ ಎಂದು ದೂರಿದ ಜನತೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಮತ್ತಷ್ಟು ಗಂಭೀರ ರೂಪ ಪಡೆದೀತು ಎಂದು ಅಧಿಕಾರಿಗಳಿಗೆ ಎಚ್ಚರಿಸಿ, ಸಮಸ್ಯೆ ಬಗೆಹರಿಲು ಪಟ್ಟು ಹಿಡಿದರು. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಯಾವುದೇ ಅಹಿತಕರ ಘಟನೆ ಎದುರಾಗದಂತೆ ಕ್ರಮವಹಿಸಿದ್ದರು. ಬೆಸ್ಕಾಂ ಉಪಕೇಂದ್ರದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ರೈತರು, ಮುಂದಿನ ಸೋಮವಾರ ದೊಳಗೆ ಸಮಸ್ಯೆ ಬಗೆಹರಿಯದೆ ಹೋದಲ್ಲಿ ಮತ್ತೊಮ್ಮೆ ಪ್ರತಿಭಟನೆ ನಡೆಸೊದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಸುರೇಶ್ ಬಾಬು, ಸಂಪತ್ ಕುಮಾರ್, ಚಂದ್ರಪ್ಪ, ಸುರೇಶ್, ರಘು, ಮಂಜು, ಯಾನಾದಹಳ್ಳಿ ಮುನಿಯಪ್ಪ, ಹೊಳಲಿ ಹೊಸೂರು ಗ್ರಾಮದ ಹರೀಶ್, ಜಗದೀಶ್ ಹಾಗು ಸುತ್ತಮುತ್ತಲಿನ ಗ್ರಾಮಸ್ತರು ಭಾಗಿಯಾಗಿದ್ದರು.