ರಾಜ್ಯ ಬಿಜೆಪಿ ಮುಖಂಡರ ಮುಖ ನೋಡೋಕೇ ಮೋದಿಯವರಿಗೆ ಅಸಡ್ಡೆಯಾಗಿದೆ : ಸಚಿವ ದಿನೇಶ್ ಗುಂಡೂರಾವ್
ಗದಗ: ರಾಜ್ಯ ಬಿಜೆಪಿ ಮುಖಂಡರ ಮುಖ ನೋಡೋಕೇ ಮೋದಿಯವರಿಗೆ ಅಸಡ್ಡೆಯಾಗಿದೆ. ಮೋದಿ ಬೆಂಗಳೂರಿಗೆ ಬಂದ್ರೆ ಅವರತ್ತ ನೋಡಲೇ ಇಲ್ಲ ಅಂತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದರು. ಗದಗ ಜಿಮ್ಸ್ ಆಸ್ಪತ್ರೆಯ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಮೋದಿಯವರು ನೋಡ್ಲಿ ಅಂತಾ ಬಿಜೆಪಿ ರಾಜ್ಯಾಧ್ಯಕ್ಷರು, ಮಾಜಿ ಸಚಿವರು ಬೀದಿಯಲ್ಲಿ ನಿಂತಿದ್ರು. ಆದ್ರೆ ಅವ್ರು ಇವರನ್ನು ತಿರುಗಿಯೂ ನೋಡ್ಲಿಲ್ಲ. ಇವ್ರಿಗಾದ್ರೂ ಸ್ವಾಭಿಮಾನ ಇರ್ಬೇಕಲ್ವಾ? ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಯಾರು ಬರಬೇಡಿ ಅಂತಾ ಅವ್ರೆ ಹೇಳಿದ್ರು. ಅದಕ್ಕೆ ನಮ್ಮವರು ಯಾರೂ ಹೋಗಿರಲಿಲ್ಲ. ಬಿಜೆಪಿಯವರು ಹೋಗಿದ್ರು. ಆದ್ರೆ ಮೋದಿಯವರನ್ನು ಕಣ್ಣು ತಿರುಗಿಸಿಯೂ ಅವ್ರನ್ನ ನೋಡ್ಲಿಲ್ಲ. ಮೋದಿಯವರನ್ನ ಕರೆಸಿ ಬೀದಿ ಬೀದಿ ಓಡಾಡ್ಸಿ ಮಾನ, ಮರ್ಯಾದೆ ತೆಗೆದ್ರು. ಮೋದಿ ಹೆಸರಲ್ಲಿ ವೋಟ್ ಕೇಳಿದ್ರು. ಬಂದಿದ್ದೇ 60 ಸೀಟ್ ಮಾತ್ರ. ಮೋದಿ ಹೆಸರು ಹಾಳು ಮಾಡಿದ್ದಕ್ಕೆ ನೋಡಲಿಲ್ಲ ಅಂತ ವ್ಯಂಗ್ಯವಾಡಿದರು. ಇನ್ನು ಕೋವಿಡ್ ಅಕ್ರಮ ತನಿಖೆ ಬಗ್ಗೆ ಆಯೋಗ ರಚನೆ ಬಗ್ಗೆ ಗುಡುಗಿದರು. ಸಾರ್ವಜನಿಕ ಲೆಕ್ಕ ಪತ್ರ ವರದಿಯನ್ನ ಹಿಂದಿನ ಸರ್ಕಾರ ಸದನಕ್ಕೆ ಒಪ್ಪಿಸಿರಲಿಲ್ಲ. ವರದಿ ಆಧಾರದಲ್ಲಿ ಹಾಗೂ ಬೇರೆ ಬೇರೆ ಮಾಹಿತಿ ಆಧಾರದ ಮೇಲೆ ತನಿಖೆ ಆಗ್ಬೇಕು ಅಂತಾ ಕೋರಿದ್ದೆವು. ರಿಟೈರ್ಡ್ ಹೈಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆಗೆ ಸರ್ಕಾರ ಆದೇಶಿಸಿದೆ. ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಈ ಹಿಂದೆ ಆರೋಪ ಮಾಡಿರುವ ಪ್ರಕಾರ ಈಗ ತನಿಖೆ ನಡೆಸಿದ್ದೇವೆ. ಅವರಿಗೆ ಭಯ ಏಕೆ? ತನಿಖೆಯನ್ನ ವಿರೋಧ ಪಕ್ಷಗಳು ಸ್ವಾಗತಿಸಬೇಕು. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಬೇಕು. ಆರೋಪ ಮಾಡಿ ಸುಮ್ಮನಾಗೋದಲ್ಲ, ಹೇಳಿದಂತೆ ತನಿಖೆ ಮಾಡಿಸುತ್ತಿದ್ದೇವೆ. ಅದೇ ರೀತಿ 40 ಪರ್ಸೆಂಟೇಜ್, ಬಿಬಿಎಂಪಿ ಹಗರಣಗಳ ಬಗ್ಗೆಯೂ ತನಿಖೆ ಮಾಡುತ್ತಿದ್ದೇವೆ ಎಂದರು. ಈ ವೇಳೆ ಕಾಂಗ್ರೆಸ್ ನ ಅನೇಕ ಮುಖಂಡರು ಉಪಸ್ಥಿತರಿದ್ದರು.