ಶ್ರೀನಿವಾಸಪುರದಲ್ಲಿ ಮುಂದುವರೆದ ಅರಣ್ಯ ಒತ್ತುವರಿ ಕಾರ್ಯಾಚರಣೆ
ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅರಣ್ಯ ಭೂಮಿ ಒತ್ತುವರಿ ಕಾರ್ಯಾಚರಣೆ ಶನಿವಾರ ರಾತ್ರಿ ಮತ್ತು ಭಾನುವಾರವೂ ಮುಂದುವರೆದಿದ್ದು, ಇಲ್ಲಿಯ ತನಕ ಸುಮಾರು ೫೬೦ ಎಕರೆ ಒತ್ತುವರಿ ಭೂಮಿಯನ್ನು ಅರಣ್ಯ ಇಲಾಖೆಯವರು ತೆರವುಗೊಳಿಸಿದ್ದಾರೆ. ಶನಿವಾರ ಮಧ್ಯರಾತ್ರಿಯಿಂದ ನಡೆದ ಕಾರ್ಯಾಚರಣೆಯಲ್ಲಿ ಕೇತಗಾನಹಳ್ಳಿ ಸಮೀಪ ಸರ್ವೇ ನಂ.೯೧ರಲ್ಲಿ ಸುಮಾರು ೪೦ಕ್ಕೂ ಹೆಚ್ಚು ಅರಣ್ಯ ಭೂಮಿಯ ಒತ್ತುವರಿ ತೆರವು ಮಾಡಲಾಗಿದ್ದು, ಇದರಲ್ಲಿ ಒತ್ತುವರಿದಾರರು ಟಮೆಟೋ, ಕೋಸು, ಕಾಪ್ಸಿಕಂ, ಮಾವಿನ ಮರಗಳನ್ನು ಬೆಳೆಸಿದ್ದರು. ಶನಿವಾರ ಮಧ್ಯರಾತ್ರಿ ೧೨ಗೆ ಜೆ.ಸಿ.ಬಿ.ಗಳ ಭರ್ಜರಿಗೆ ಸುಮಾರು ೪೦ಕ್ಕೂ ಹೆಚ್ಚು ಎಕರೆಗಳಲ್ಲಿ ತರಕಾರಿ ಬೆಳೆಗಳನ್ನು ನೆಲಸಮ ಮಾಡಲಾಗಿದೆ. ಬೆಳಗಾಗುವ ಒಳಗಾಗಿ ತರಕಾರಿ ಬೆಳೆಗಳು ನೆಲಸಮಗೊಂಡಿರುವದನ್ನು ಕಂಡ ಒತ್ತುವರಿದಾರರು ನಿಟ್ಟುಸಿರು ಬಿಡುವಂತಾಯಿತು. ಕೇತಗಾನಹಳ್ಳಿ ಸುಮಾರು ೧೦೦ಕ್ಕೂ ಹೆಚ್ಚು ಎಕರೆ ಪ್ರದೇಶವನ್ನು ಗ್ರಾಮಸ್ಥರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಹಂಚಿಕೆ ಮಾಡಿಕೊಂಡು ಮಾವು ಸೇರಿದಂತೆ ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದರು. ಇವರಿಗೂ ಅರಣ್ಯ ಇಲಾಖೆಯವರು ನೋಟಿಸ್ ನೀಡಿ ತೆರವುಗೊಳಿಸುವಂತೆ ಸೂಚನೆ ನೀಡಿದ್ದರು. ಸದರಿ ಜಾಗ ಗೋಮಾಳಕ್ಕೆ ಸೇರಿದ್ದು, ನಮ್ಮ ಜಮೀನು ಯಾವುದೇ ಕಾರಣಕ್ಕೂ ಅರಣ್ಯಕ್ಕೆ ಸೇರಿಲ್ಲ ಎಂದು ಬೆಳೆಗಳನ್ನು ತೆರವು ಮಾಡದೇ ಇದ್ದರು. ಇನ್ನು ಕೆಲವು ಸದರಿ ಜಮೀನಿನ ವಿಷಯದಲ್ಲಿ ಕೋರ್ಟು ಮೆಟ್ಟಿಲೇರಿದ್ದರು. ಇದ್ಯಾವುದನ್ನೂ ಲೆಕ್ಕಿಸದೆ ಶನಿವಾರ ಸಂಜೆ ಗಡಿ ಗುರ್ತಿಸಿದ ಅರಣ್ಯ ಇಲಾಖೆಯವರು ಶನಿವಾರ ಮಧ್ಯರಾತ್ರಿ ೧೨ಗಂಟೆಯ ನಂತರ ಜೆ.ಸಿ.ಬಿ.ಗಳ ಮೂಲಕ ಮಾವು ಮತ್ತು ತರಕಾರಿ ಬೆಳೆಗಳನ್ನು ನೆಲಸಮಗೊಳಿಸಿದ್ದಕ್ಕೆ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸರ್ವೇ ನಂ.೯೧ಕ್ಕೆ ಸೇರಿದ ಜಾಗದಲ್ಲಿ ಶ್ರೇಯಸ್ ಶಿಕ್ಷಣ ವಿದ್ಯಾ ಸಂಸ್ಥೆಯ ಕಟ್ಟಡವೂ ಇದೆ. ಹಾಗೂ ಭಲಾಡ್ಯರು ಮತ್ತು ರಾಜಕೀಯ ವ್ಯಕ್ತಿಗಳಿಗೆ ಸೇರಿದ ಕಾರಣ ಅದನ್ನು ನೆಲಸಮಗೊಳಿಸದೆ ಹಾಗೆಯೇ ಬಿಟ್ಟಿದ್ದು, ರೈತರ ತರಕಾರಿ ಬೆಳೆಗಳನ್ನು ನೆಲಸಮಗೊಳಿಸಿರುವುದು ಯಾವ ನ್ಯಾಯ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆರೋಪಿಸಿದ್ದಾರೆ. ನೂರಾರು ಎಕರೆಗಳ ಜಾಗದಲ್ಲಿ ಬೆಳೆದು ನಿಂತ ಮಾವಿನ ಮರಗಳು, ಕೋಳಿಫಾರಂಗಳು, ತರಕಾರಿ ಬೆಳೆಗಳನ್ನು ಅರಣ್ಯ ಇಲಾಖೆಯವರು ನಮಗೆ ಸೇರಿದ್ದೆಂದು ನೆಲಸಮ ಮಾಡುತ್ತಿದ್ದರೂ ಹಾಲಿ ಶಾಸಕರು ಮತ್ತು ಮಾಜಿ ಶಾಸಕರು ಹಾಗೂ ರಾಜಕಾರಣಿಗಳು ನಮ್ಮ ಬೆಂಬಲಕ್ಕೆ ಬರುತ್ತಿಲ್ಲ ಎಂದು ಒತ್ತುವರಿದಾರರು ಹಾಲಿ ಮತ್ತು ಮಾಜಿ ಶಾಸಕರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ ಹಾಗೂ ಇನ್ನೂ ಕೆಲವು ಒತ್ತುವರಿ ತೆರವು ಮಾಡಲಿ ಆದರೆ ಬೆಳೆದು ನಿಂತ ಮಾವಿನ ಮರಗಳನ್ನು ಇಲಾಖೆಯವರು ಕಡಿಯಬಾರದಾಗಿದ್ದು, ಆ ಮರಗಳನ್ನು ಉಳಿಸಿಕೊಳ್ಳಬಹುದಾಗಿತ್ತು. ಹಾಗೂ ತರಕಾರಿ ಬೆಳಗಳು ಕೋಯ್ಲಿಗೆ ಬರುವ ತನಕ ಒತ್ತುವರಿದಾರರಿಗೆ ಅವಕಾಶ ನೀಡಬಹುದಾಗಿತ್ತು ಎಂಬುವುದು ಕೆಲವರ ವಾದವಾಗಿದೆ. ಆದರೆ ಯಾರೂ ಸಹ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲು ಮುಂದಾಗುತ್ತಿಲ್ಲ. ಅರಣ್ಯ ಇಲಾಖೆಯವರು ಬೆಳೆಸಿದ್ದ ಮರಗಳನ್ನು ಕಡಿದು ಒತ್ತುವರಿ ಮಾಡಿಕೊಳ್ಳುವ ಸಮಯದಲ್ಲಿ ಒತ್ತುವರಿದಾರರಿಗೆ ಮರ ಕಡಿಯುತ್ತಿದ್ದೇವೆಂಬುವುದು ಜ್ಞಾನೋದಯವಾಗಲಿಲ್ಲವೇ ಅವರು ನಮ್ಮ ಇಲಾಖೆಯ ಜಮೀನಿನಲ್ಲಿ ಒತ್ತುವರಿ ಮಾಡಿಕೊಂಡು ಬೆಳೆಸಿದ ಮರವನ್ನು ಕಡಿಯುವಾಗ ಅವರಿಗೆ ಜ್ಞಾನೋದಯವಾಗಿದೆ. ಅವರು ಬೆಳೆಸಿದ ಮರಗಳನ್ನು ಮುಂದುವರಿಸಿಕೊಂಡು ಹೋದರೆ ಮತ್ತೊಂದು ದಿನ ಇದು ನಮ್ಮ ಮರಗಳೆಂದು ಬರುತ್ತಾರೆ. ಆದ ಕಾರಣ ಒತ್ತುವರಿ ಜಮೀನಿನಲ್ಲಿ ಇರುವ ಮರಗಳನ್ನು ತೆರವು ಮಾಡಿ ಸದರಿ ಜಾಗದಲ್ಲಿ ನಾವು ಶ್ರೀಗಂಧ, ತೇಗು, ಬೀಟೆ, ಜುಮ್ಮುನೇರಳೆ ಸೇರಿದಂತೆ ಸುಮಾರು ೯ ವಿವಿಧ ಜಾತಿಯ ಮರಗಳನ್ನು ಬೆಳಸಲಾಗುತ್ತದೆ. ಈಗಾಗಲೇ ಸದರಿ ಜಾಗದಲ್ಲಿ ೧೫೦೦ ಎಕೆರೆ ಒತ್ತುವರಿಯಾಗಿದೆ. ಇದರಲ್ಲಿ ಭಾನುವಾರ ಮಧ್ಯಾಹ್ನದ ತನಕ ೫೬೧ ಎಕರೆ ಜಮೀನನ್ನು ತೆರವು ಮಾಡಲಾಗಿದೆ. ಎಲ್ಲರಿಗೂ ನೋಟಿಸ್ ಗಳನ್ನು ನೀಡಿ ಸದರಿ ಜಮೀನಿನಲ್ಲಿ ಇರುವ ಬೆಳೆ ಮತ್ತು ಕೋಳಿಫಾರಂ ತೆರವುಗೊಳಿಸಲು ಕಲಾವಕಾಶವನ್ನು ನೀಡಲಾಗಿತ್ತು.