ಧರ್ಮಸ್ಥಳದಲ್ಲಿ ಮಹಿಳೆಯರು ಮತ್ತು ಪುರುಷರ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಪತ್ರವನ್ನು ಸರ್ಕಾರ ಪರಿಗಣಿಸುವ ಮೂಲಕ ತನಿಖೆಗಾಗಿ ಎಸ್ಐಟಿ ರಚಿಸಿದೆ. ಎಸ್ಐಟಿ ಸದಸ್ಯರಾಗಿ ಅನುಚೇತ್, ಸೌಮ್ಯಲತಾ, ಜಿತೇಂದ್ರಕುಮಾರ್ ಕೂಡ ಇದ್ದಾರೆ. ಈ ವಿಶೇಷ ತನಿಖಾ ತಂಡವು ಕಳೆದ 20 ವರ್ಷಗಳಿಂದ ನಾಪತ್ತೆಯಾಗಿರುವ ಮಹಿಳೆಯರು, ವಿದ್ಯಾರ್ಥಿನಿಯರು, ಹಲ್ಲೆ, ಅತ್ಯಾಚಾರ, ಅಸ್ವಾಭಾವಿಕ ಸಾವಿನ ಬಗ್ಗೆ ತನಿಖೆ ನಡೆಸಲಿದೆ.
ಈ ಆರೋಪದ ತನಿಖೆಗಾಗಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ನ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ ರಚಿಸುವಂತೆ ಒತ್ತಾಯಿಸಿ ವಕೀಲರ ತಂಡಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಸಾಮಾಜಿಕ ಮಾಧ್ಯಮಗಳಲ್ಲೂ ಈ ಪ್ರಕರಣದ ತನಿಖೆಗೆ ಎಸ್ಐಟಿ ರಚನೆಗೆ ಆಗ್ರಹಗಳು ತೀವ್ರವಾಗಿ ಕೇಳಿಬರುತ್ತಿವೆ.
ಧರ್ಮಸ್ಥಳ ದೇವಸ್ಥಾನದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿದ್ದ ನೈರ್ಮಲ್ಯ ಸಿಬ್ಬಂದಿಯೊಬ್ಬರು ಈ ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದರು. ಹಿರಿಯ ವಕೀಲರಾದ ಸಿ.ಎಸ್. ದ್ವಾರಕನಾಥ್, ಉಮಾಪತಿ ಮತ್ತು ಇತರರ ನೇತೃತ್ವದ ತಂಡವು ಬರೆದ ಪತ್ರದಲ್ಲಿ ಕಳೆದ ಕೆಲವು ವಾರಗಳಲ್ಲಿ ಸಾಮೂಹಿಕ ಹತ್ಯೆ, ಸಾಮೂಹಿಕ ಅತ್ಯಾಚಾರ ಮತ್ತು ಸಾಮೂಹಿಕ ಅಂತ್ಯಕ್ರಿಯೆಯ ಘಟನೆಗಳು ವರದಿಯಾಗಿವೆ ಎಂದು ಉಲ್ಲೇಖಿಸಿದೆ.
ತನಿಖೆಯನ್ನು ಸ್ಥಳೀಯ ಎಸ್ಐ ಒಬ್ಬರು ಡಿವೈಎಸ್ಪಿ ಮೇಲ್ವಿಚಾರಣೆಯಲ್ಲಿ ನಿರ್ವಹಿಸುತ್ತಿರುವಂತೆ ತೋರುತ್ತಿದೆ. ಸಾಮೂಹಿಕ ಸಮಾಧಿಯನ್ನು ಪ್ರತ್ಯಕ್ಷದರ್ಶಿ ಬಹಿರಂಗಪಡಿಸಿದ್ದಾರೆ, ಆದರೆ ಶವಗಳನ್ನು ಇನ್ನೂ ಹೊರತೆಗೆಯಲಾಗಿಲ್ಲ. ಬಿಎನ್ಎಸ್ಎಸ್ನ ಆದೇಶದಂತೆ ತನಿಖೆ ಪ್ರಗತಿಯಲ್ಲಿಲ್ಲ ಎಂದು ತೋರುತ್ತಿದೆ. ಎಸ್ಐಟಿ ತನಿಖೆ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ನಡೆಯಬೇಕು. ವಿಚಾರಣೆ ಪ್ರಕ್ರಿಯೆಯನ್ನು ಸಂಪೂರ್ಣ ವಿಡಿಯೋ ದಾಖಲೆ ಮಾಡಬೇಕು ಎಂದು ಮನವಿ ಸಲ್ಲಿಸಿದೆ.
ಆರೋಪಿತ ಅಪರಾಧಗಳನ್ನು ಪ್ರಭಾವಿ ವ್ಯಕ್ತಿಗಳು ಮಾಡಿರಬಹುದು, ಆದ್ದರಿಂದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ನೇತೃತ್ವದಲ್ಲಿ ಎಸ್ಐಟಿ ರಚಿಸಬೇಕು ಎಂದು ತಂಡ ಕೋರಿತ್ತು. ಈ ಅಪರಾಧಗಳಲ್ಲಿ ಭಾಗಿಯಾಗಿರುವ ಎಲ್ಲಾ ವ್ಯಕ್ತಿಗಳು, ಅವರ ಪ್ರಭಾವವನ್ನು ಲೆಕ್ಕಿಸದೆ, ಬಂಧಿಸಿ ಕಸ್ಟಡಿ ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದೆ.