ಬೆಂಗಳೂರು: ಜುಲೈ 08 ಪರಿಸರಪ್ರೇಮಿ ಡಾ.ಸಾಲುಮರದ ತಿಮ್ಮಕ್ಕನವರಿಗೆ ರಾಜ್ಯ ಸರ್ಕಾರ ಗೌರವ ನೀಡಿ ಪರಿಸರ ರಾಯಭಾರಿಯನ್ನಾಗಿ ನೇಮಿಸಿ ಆದೇಶಿಸಿದೆ. ಈ ಮೂಲಕ ರಾಜ್ಯ ಸಚಿವಸಂಪುಟ ದರ್ಜೆಯ ಸ್ಥಾನಮಾನ ನೀಡಿ ಆದೇಶ ಹೊರಡಿಸಿದೆ.
ನಾಡೋಜ ಡಾ. ಸಾಲುಮರದ ತಿಮ್ಮಕ್ಕನವರು ಪರಿಸರವಾದಿಯಾಗಿದ್ದು ಮಕ್ಕಳಿಲ್ಲದ ಅವರು ರಸ್ತೆಬದಿಯಲ್ಲಿ ಆಲದಮರಗಳನ್ನ ನೆಟ್ಟು ಅವುಗಳನ್ನೇ ಮಕ್ಕಳಂತೆ ಸಾಕಿದ್ದರು. ಅನಕ್ಷರಸ್ಥೆಯಾಗಿದ್ದರೂ ಪರಿಸರದ ಬಗ್ಗೆ ಅಗಾಧ ಪ್ರೇಮ ಮತ್ತು ಕಾಳಜಿ ಹೊಂದಿದ್ದರು. ಇವರ ಈ ಸೇವಾಕಾರ್ಯ ಪರಿಗಣಿಸಿ ಭಾರತ ಸರ್ಕಾರದ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ತಿಮ್ಮಕ್ಕ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರು. ಮದುವೆ ಬಳಿಕ ಮಕ್ಕಳಾಗದ ಕಾರಣ ಗಂಡನ ಊರಾದ ಹುಲಿಕಲ್ ನಲ್ಲಿ ಸಾಲು ಮರಗಳನ್ನು ನೆಟ್ಟು ಸಾಲು ಮರದ ತಿಮ್ಮಕ್ಕ ಎಂದೇ ಖ್ಯಾತರಾಗಿದ್ದಾರೆ. ಇತ್ತೀಚಿಗೆ ಇವರು 111ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.